Showing posts with label ಅರಸಿ ಬಂದ ಅದೃಷ್ಟ. Show all posts
Showing posts with label ಅರಸಿ ಬಂದ ಅದೃಷ್ಟ. Show all posts

Friday, 8 May 2020

ಮಕ್ಕಳ ನೀತ ಕಥೆ ಅರಸಿ ಬಂದ ಅದೃಷ್ಟ


ಮಕ್ಕಳ ಕಥೆ: ೦೪ ಅರಸಿ ಬಂದ ಅದೃಷ್ಟ


ಚಂದಾಪುರ ಎನ್ನುವ ಹಳ್ಳಿಯಲ್ಲಿ ರಾಮ-ಭೀಮ ಎಂಬ ಇಬ್ಬರು ಅಣ್ಣತಮ್ಮರಿದ್ದರು. ಅವರಿಗೆ ಮೂರ್ತಿಗಳನ್ನು ತಯಾರಿಸುವ ಕಲೆ ರಕ್ತಗತವಾಗಿತ್ತು. ಹಾಗಾಗಿ ಪ್ರತಿದಿನ ಕಷ್ಟಪಟ್ಟು ವಿವಿಧ ಮೂರ್ತಿಗಳ ತಯಾರಿಸಿ ಮಾರಲು ಇಡುತ್ತಿದ್ದರು. ಆದರೆ ಅವರ ಹಳ್ಳಿಯಲ್ಲಿ ಯಾರೂ ಕೊಳ್ಳುವವರೇ ಇರಲಿಲ್ಲ. ಕಾರಣ ಹಳ್ಳಿಗರಿಗೆ ಅದರ ಅವಶ್ಯಕತೆಯೇ ಇರಲಿಲ್ಲ. ಹಾಗಾಗಿ ತುಂಬಾ ಕಷ್ಟದಲ್ಲಿ ಜೀವನ ನಡೆಯುತಲಿತ್ತು. ಇದನ್ನು ಗಮನಿಸಿದ ಅವರ ಗೆಳೆಯ ಒಂದು ಉಪಾಯ ಮಾಡಿದ. ನಿಮ್ಮ ಮೂರ್ತಿಗಳು ಮಾರಾಟವಾಗಲು ನಾನು ಹೇಳಿದ ಹಾಗೆಯೇ ಮಾಡಿರಿ ಎಂದು ಸಲಹೆ ನೀಡಿದ. ಅದರಂತೆ ಅಣ್ಣ ರಾಮು ಪ್ರತಿದಿನ ಬೆಳಿಗ್ಗೆ ಒಂದಷ್ಟು ಮೂರ್ತಿಗಳನ್ನು ಗೋಣಿಚೀಲದಲ್ಲಿ ತುಂಬಿಸಿಕೊಂಡು ಪಟ್ಟಣದ ಕಡೆಗೆ ಹೋಗುವ ಮಾರ್ಗದಲ್ಲಿ ಇರಿಸಿ ಮಾರಾಟ ಮಾಡಲು ಕುಳಿತುಕೊಳ್ಳುತ್ತಿದ್ದ. ಅಲ್ಲಿ ಇರುವ ವಿಶಾಲವಾದ ಮರದ ಕೆಳಗೆ ಎಲ್ಲಾ ಮೂರ್ತಿಗಳ ಸುಂದರವಾಗಿ ಜೋಡಿಸಿಟ್ಟು ಗಿರಾಕಿಗಳಿಗಾಗಿ ಕಾಯುತ್ತಿದ್ದ. ಒಮ್ಮೆ ವಿದೇಶಿಗರು ಸಂಸಾರ ಸಮೇತ ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಇವನ ಮೂರ್ತಿಗಳ ಕೆತ್ತನೆಯ ಮೇಲೆ ದೃಷ್ಟಿ ಹಾಯಿಸಿದರು. ಅವರಿಗೂ  ಖುಷಿಯಾಗಿ ಕಾರು ನಿಲ್ಲಿಸಿ ಖರೀದಿಸಲು ಹೊರಟರು. ಆಗ ರಾಮುವು ಮನದೊಳಗೆ ಖುಷಿ ಪಟ್ಟು "ವಿದೇಶಿಗರು ನನ್ನ ಕಡೆಗೆ ಬರುತ್ತಾ ಇದ್ದಾರೆ. ಈದಿನ ಚೆನ್ನಾಗಿದೆ. ನಮ್ಮ ಮೂರ್ತಿಗಳಿಗೆ ಒಳ್ಳೆ ಬೆಲೆ ಸಿಕ್ಕಿ ಮಾರಾಟವಾಗಲಪ್ಪ.." ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದನು. ಹಾಗೆಯೇ ವಿದೇಶಿಗರು ಬಂದು ಧ್ಯಾನಸ್ಥ ಬುದ್ಧನ ಮೂರ್ತಿಯನ್ನು ಕೇಳಿದರು. ಅವನು ಅದರ ಬೆಲೆ ಒಂದು ನೂರು ರೂಪಾಯಿ ಎಂದನು‌. ಆಗ ವಿದೇಶಿಗರಿಗೆ ಅಚ್ಚರಿಯಾಯಿತು. "ಇಷ್ಟು ಕಡಿಮೆ ಬೆಲೆಯಲ್ಲಿ ಮಾರುತ್ತಿರುವೆಯಾ? ನಿನಗೆ ನಿನ್ನ ಮೂರ್ತಿಗಳ ಮೌಲ್ಯ ತಿಳಿದಿಲ್ಲ. ನಾವಿದನ್ನು ವಿದೇಶಕ್ಕೆ ಕೊಂಡೊಯ್ದರೆ  ಲಕ್ಷ ಲಕ್ಷ ರೂಪಾಯಿ ಮೌಲ್ಯವಿದೆ, ತಿಳಿದಿರುವೆಯಾ? ಎಂದು ಕೇಳಿದರು.
ಆಗ ರಾಮುವಿಗೆ " ಹೌದೇ, ನಿಜಕ್ಕೂ ಈ ವಿಷಯ ನನಗೆ ತಿಳಿದಿಲ್ಲ ಬುದ್ಧಿ. ನಾವು ಹಳ್ಳಿಗರು. ನೀವೇ ಒಂದಷ್ಟು ಹಣ ಕೊಟ್ಟು ಮೂರ್ತಿ ತೆಗೆದುಕೊಂಡು ಹೋಗಿ ಎಂದನು. ಆಗ ಸಾವಿರ ರೂಪಾಯಿ ನೀಡಿ ಮೂರ್ತಿಯ ಖರೀದಿಸಿದರು. ಹಾಗೆಯೇ ವಾಪಾಸ್ಸಾಗುವಾಗ ಕಿವಿಮಾತನ್ನು ಹೇಳಿದರು. "ನಿಮ್ಮ ಪಕ್ಕದ ಊರಿನ ಜಾತ್ರೆ ನೋಡಲು ನಮ್ಮಂತೆ ನೂರಾರು ವಿದೇಶಿಗರು ಬರುವವರಿದ್ದಾರೆ. ಎಲ್ಲರೂ ಇದೇ  ಮಾರ್ಗದಲ್ಲಿ ಸಾಗಬೇಕು. ಇನ್ನಷ್ಟು  ಆಕರ್ಷಕ ಮೂರ್ತಿಗಳನ್ನು ತಯಾರಿಸಿ ಮಾರಲು ಕುಳಿತುಕೋ. ಯಾರು ಕೇಳಿದರೂ ಸಾವಿರ ರೂಪಾಯಿ ಎಂದೇ ಹೇಳು", ಎಂದು ಹೇಳಿ ಹೊರಟುಹೋದರು. ರಾಮುವಿಗೆ ಎಲ್ಲಿಲ್ಲದ ಸಂತಸವಾಯಿತು.
ಸಂಜೆಯಾದ ಕಾರಣ ಮೂರ್ತಿಗಳನ್ನು ಗೋಣಿ ಚೀಲದಲ್ಲಿ ತುಂಬಿಸಿಟ್ಟು ಮರದ ಹಿಂಬದಿಯಲ್ಲೇ ಮುಚ್ಚಿಟ್ಟು ಮನೆ ಕಡೆಗೆ ನಡೆದನು. ತಮ್ಮನಲ್ಲಿ ನಡೆದುದನ್ನು ಹೇಳಿ ಖುಷಿಪಟ್ಟನು. ಅಷ್ಟೊಂದು ಹಣವನ್ನು ಎಂದೂ ನೋಡದ ಅವರು ಕನಸಿನ ಲೋಕದಲ್ಲಿ ತೇಲುತ್ತಿದ್ದರು. ಹಾಗೆಯೇ ವಿದೇಶಿಗನ ಸಲಹೆಯಂತೆ ಒಂದಷ್ಟು ಹೊಸ ಬಗೆಯ ಮೂರ್ತಿಗಳನ್ನು ರಾತ್ರಿಪೂರ ನಿದಿರೆ ಬಿಟ್ಟು ತಯಾರು ಮಾಡಿದರು. ಆದರೆ ಅವನ ಮೂರ್ಖತನದ ನೆನಪೇ ಆಗಲಿಲ್ಲ. ರಾಮು ಮುಂಜಾನೆ ಉಳಿದ ಹೊಸ ಮೂರ್ತಿಗಳ ಹಿಡಿದು ಅದೇ ಮರದ ಕೆಳಗೆ ಬಂದು ನೋಡಿದರೆ ಅಲ್ಲಿ ಮೂರ್ತಿಗಳೇ ಮಾಯವಾಗಿದ್ದವು. ಕಾರಣ ಯಾರೋ ಕದ್ದೊಯ್ದಿದ್ದರು‌. ರಾಮುವಿಗೆ ಒಮ್ಮೆ ಎದೆ "ದಗ್" ಎಂದಾಯಿತು. "ಅಷ್ಟು ಬೆಲೆಬಾಳುವ ಮೂರ್ತಿಗಳ ಕಳೆದುಕೊಂಡೆವಲ್ಲ, ಏನು ಮಾಡುವುದೀಗ? ಯಾರು ಕದ್ದರು? ನಮ್ಮ ಮೂರ್ತಿಗಳೆಲ್ಲ ಎಲ್ಲಿ ಹೋಯಿತು? ಅಯ್ಯೋ!!" ಎಂದು ಗೋಳಾಡಿದನು. ಚಿಂತಾಕ್ರಾಂತನಾಗಿ ತಲೆಗೆ ಕೈಹೊತ್ತು ಕುಳಿತುಕೊಂಡನು. ನಾನೆಂತ ಮೂರ್ಖ‌ ತಪ್ಪುಮಾಡಿಬಿಟ್ಟೆನಲ್ಲ ಎಂದು ರೋಧಿಸಿದನು. ವ್ಯಾಪಾರ ಮಾಡಲು ಯಾವ ಆಸಕ್ತಿಯೂ ಇರಲಿಲ್ಲ. ಆದರೆ ಆ ದಿನವೂ ಒಬ್ಬ ವಿದೇಶಿಗರು ಬಂದು ಸಾವಿರ ರೂಪಾಯಿ ನೀಡಿ ಮೂರ್ತಿ ಖರೀದಿಸಿದ್ದರು‌. ಈ ದಿನ ಮತ್ತೆ ತಪ್ಪು ಮಾಡಲು ಹೋಗಲಿಲ್ಲ. ಸಂಜೆಯ ಮೇಲೆ ಉಳಿದ ಮೂರ್ತಿಗಳ ಚೀಲದಲ್ಲಿ ತುಂಬಿಸಿಕೊಂಡು ಮನೆಗೆ ವಾಪಾಸ್ಸಾದನು. ತಮ್ಮನಿಗೆ ನಡೆದ ಘಟನೆಯನ್ನು ವಿವರಿಸಿದನು. ಅವನೂ ಕೂಡ ಅಣ್ಣನಿಗೆ ಸಮಾಧಾನ ಮಾಡಿ ಆ ರಾತ್ರಿಯೂ  ನಿದಿರೆ ಮಾಡದೇ ಒಂದಷ್ಟು ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡರು.ಹೀಗೆ ಕಷ್ಟಪಟ್ಟು ಹಗಲು ರಾತ್ರಿಯೆನ್ನದೇ ಅನೇಕ ಮೂರ್ತಿಗಳ ತಯಾರಿಸಿದರು. ಅಣ್ಣನು ಮಾರಾಟಮಾಡಲು ಹೋಗುತ್ತಿದ್ದ. ತಮ್ಮನು ಮೂರ್ತಿಗಳ ತಯಾರಿಸುತ್ತಿದ್ದ‌ನು. ಜಾತ್ರೆಯಿದ್ದ ಕಾರಣ ಬಂದ ವಿದೇಶಿಗರು ಖರೀದಿಸಿದರು. ಜಾತ್ರೆಗೂ ಒಂದಷ್ಟು ಮೂರ್ತಿಗಳ ಕೊಂಡೊಯ್ದು ಮಾರಲು ಆರಂಭಿಸಿದರು. ಹೀಗೆ ಒಂದು ತಿಂಗಳಲ್ಲಿ ಶ್ರೀಮಂತರಾದರು. ಅವರ ಕಷ್ಟಗಳೆಲ್ಲ ಕಳೆಯಿತು‌.
.
.
ಕಥೆಗಾರ್ತಿ : ಸಿಂಧು ಭಾರ್ಗವ್. ಬೆಂಗಳೂರು