Showing posts with label ಸಿಂಧು ಭಾರ್ಗವ್.. Show all posts
Showing posts with label ಸಿಂಧು ಭಾರ್ಗವ್.. Show all posts

Friday, 8 May 2020

ಮಕ್ಕಳ ನೀತಿ ಕಥೆ ಏಟಿಗೆ ಎದುರೇಟು


ಮಕ್ಕಳ ಕಥೆ ೧೧: ಏಟಿಗೆ ಎದುರೇಟು

ರಂಗೇಗೌಡರ ಮನೆಯಲ್ಲಿ ರಾಕಿ ನಾಯಿ ಮತ್ತು ಟಿಂಕು ಬೆಕ್ಕು ಬಹಳ ಸ್ನೇಹಿತರಾಗಿದ್ದರು. ಮನೆಯೊಡೆಯನಿಗೆ ಅಚ್ಚುಮೆಚ್ಚಿನ ಸಾಕುಪ್ರಾಣಿಗಳಾಗಿದ್ದವು. ಟಿಂಕುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ತಲೆ ಸವರುತ್ತ ಇದ್ದ. ಹಾಗೆಯೇ ರಾಕಿಯನ್ನು ಕೂಡ ತನ್ನ ಜೊತೆಗೆ ತೋಟ, ಗದ್ದೆ ಪಕ್ಕದ ಅಂಗಡಿಗೆಲ್ಲ ಕರೆದುಕೊಂಡು ಹೋಗುತ್ತಿದ್ದ. ಅದರಲ್ಲಿ ಟಿಂಕು ತುಂಬಾ ತಂಟೆ ಮಾಡುವ ಬೆಕ್ಕು. ರಾಕಿಯನ್ನು ಮನೆಯಿಂದ ಹೊರಗೆ ಕಟ್ಟಿಹಾಕಿರುತ್ತಾರೆ ಎಂದು ಅದನ್ನು ನೋಡಿ ಅಣಕಿಸುತ್ತ ಇರುವುದು. ಅಲ್ಲದೇ ಅದು ಗಾಢ ನಿದ್ದೆಗೆ ಜಾರುವಾಗಲೇ ಬಂದು ಕೀಟಲೆ ಮಾಡಿ ನಿದ್ದೆ ಕೆಡಿಸುತ್ತ ಇತ್ತು.
ಆಗ ಕೋಪಗೊಳ್ಳುವ ರಾಕಿ ಅಟ್ಟಿಸಿಕೊಂಡು ಹೋದರೆ ಮನೆ ಒಳಗೆ ಓಡಿ ಹೋಗುತ್ತಿತ್ತು. ಟಿಂಕು ಬೆಕ್ಕಿನ ಈ ಹುಚ್ಚಾಟಕ್ಕೆ ರೋಸಿಹೋದ ನಾಯಿ ಏನಾದರು ಮಾಡಿ ಇದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಯೋಚಿಸಿತು.
ಏನು ಮಾಡುವುದು ಎಂದು ತುಂಬಾ ಯೋಚಿಸಿ ಒಂದು ಉಪಾಯ ಮಾಡಿತು. "ಟಿಂಕು ಬೆಕ್ಕಿಗೆ ಮೀನುಗಳೆಂದರೆ ಎಲ್ಲಿಲ್ಲದ ಪ್ರೀತಿ. ಯಜಮಾನ ಮೀನನ್ನು ತಂದು ಅಡುಗೆ ಮಾಡಲು ಹೆಂಡತಿಗೆ ಹೇಳುತ್ತಿದ್ದ. ಆಗ ಮನೆ ಹೊರಗಿನ ತೆಂಗಿನ ಕಟ್ಟೆ ಹತ್ತಿರವೇ ಅದನ್ನು ಸ್ವಚ್ಛ ಮಾಡಿ ತುಂಡುಮಾಡಿ ಮನೆಯೊಳಗೆ ತರುತ್ತಿದ್ದರು. ಉಳಿದ ಭಾಗಗಳೆಲ್ಲ ಈ ಬೆಕ್ಕು ತಿನ್ನುತ್ತಾ ಇತ್ತು. ಹಾಗೆಯೇ ರಾಕಿ ಕೇಳಿದರೆ ಸ್ವಲ್ಪ ಕೊಡುತ್ತಿತ್ತು.
ಇದನ್ನೇ ದಾಳವಾಗಿಸಿಕೊಂಡು ಒಮ್ಮೆ ಯಜಮಾನ ಮೀನುಗಳನ್ನು ತಂದು, ತೆಂಗಿನ ಕಟ್ಟೆಯಲ್ಲಿ ಅದರ ಪಾತ್ರೆಯನ್ನಿಟ್ಟು ಹೆಂಡತಿಯನ್ನು ಕರೆಯಲು ಮನೆಯೊಳಗೆ ಹೋಗಿದ್ದ. ಆಗಲೇ ಚುರುಕಾದ ನಾಯಿ, ಟಿಂಕು ಬೆಕ್ಕನ್ನು ಕರೆದು "ಮೀನು ಬಂತು ..ಮೀನು...ಬಾ... ಬಾ..." ಎಂದು ಮೆಲ್ಲಗೆ ಕರೆಯಿತು. ಬಾಯಲ್ಲಿ ನೀರು ತರಿಸಿಕೊಂಡ ಟಿಂಕು ಮಾರ್ಜಾಲ‌ ನಡಿಗೆಯಿಂದ ಬಂದು ಪಾತ್ರೆಯೊಳಗಿದ್ದ ಒಂದು ದೊಡ್ಡ ಮೀನನ್ನು ಕಚ್ಚಿಕೊಂಡು ತೋಟದ ಕಡೆಗೆ ಓಡಿಹೋಯಿತು. ಅಲ್ಲೇ ಕುಳಿತು ಹೊಟ್ಟೆ ತುಂಬಾ ತಿಂದಿತು.
ಹಾಗೆಯೇ ಏನೂ ತಿಳಿದೇ ಇಲ್ಲವೆಂಬಂತೆ ವಾಪಾಸ್ಸಾಗಿ ಮನೆಯೊಳಗಿನ ಪಡಸಾಲೆಯಲ್ಲಿ ಹೊಟ್ಟೆ ಉಬ್ಬರಿಕೊಂಡು ಮಲಗಿತ್ತು. ನಿದಿರೆ ಮಾಡುತ್ತಿರುವ ಹಾಗೆ ನಟಿಸುತ್ತಿತ್ತು. ಮನೆಯೊಡತಿ ಮೀನುಗಳನ್ನು ಸ್ವಚ್ಛ ಮಾಡಲು ತೆಂಗಿನ ಕಟ್ಟೆ ಹತ್ತಿರ ಹೋಗಿ‌ ನೋಡಿದರೆ ತಂದಿದ್ದ ದೊಡ್ಡ ಎರಡು ಮೀನುಗಳಲ್ಲಿ ಒಂದು ಮೀನು ಕಾಣದಾಗಿತ್ತು. ಆಗ ನಾಯಿ "ಕುಯ್...ಕುಯ್... ಎಂದು ಬಾಲ ಅಲ್ಲಾಡಿಸುತ್ತ ಬೆಕ್ಕಿನ ಕಡೆ ನೋಡಿ ಟಿಂಕುವೇ ಮೀನನ್ನು ತಿಂದದ್ದು.. ಅದರ ಹೊಟ್ಟೆ ನೋಡು.. ಎನ್ನುವ ಹಾಗೆ ಸನ್ನೆ ಮಾಡಿತು.
ಇದನ್ನರಿತ ಮನೆಯೊಡತಿ ಟಿಂಕುವಿಗೆ " ಇನ್ನು ಕದ್ದು ಮೀನು ತಿನ್ನುತ್ತಿಯಾ.." ಎಂದು ಸಿಡುಕುತ್ತಾ ಚೆನ್ನಾಗಿ ಹೊಡೆದು ಓಡಿಸಿಬಿಟ್ಟರು. " ಅಯ್ಯೋ... ಸತ್ತೇ.. ಕಾಪಾಡಿ.. ಇನ್ನು ಹೀಗೆ ಮಾಡುವುದಿಲ್ಲ.." ಎಂದು ಬೆಕ್ಕು ಹೆದರಿ ಓಡಿ ಹೋಗಿ ತನ್ನ ಪ್ರಾಣ ಉಳಿಸಿಕೊಂಡಿತು. ರಾಕಿ ಮನೆ ಹೊರಗಿನಿಂದಲೇ ಇದನ್ನೆಲ್ಲ ನೋಡುತ್ತ ಖುಷಿಯಿಂದ ಒಳಗೊಳಗೆ ನಗುತ್ತಿತ್ತು.
.
.
ಕಥೆಗಾರ್ತಿ : ಸಿಂಧು ಭಾರ್ಗವ್ | ಬೆಂಗಳೂರು

ಮಕ್ಕಳ ನೀತಿ ಕಥೆ ಸೊಕ್ಕಿನ ಕೋಕಿಲ


ಮಕ್ಕಳ ಕಥೆ: ೯ ಸೊಕ್ಕಿನ ಕೋಕಿಲಾ


ಮಾವಿನ ಮರದಲಿ ಜೋಡಿ ಗಿಳಿಗಳು ಗೂಡು ಕಟ್ಟಿಕೊಂಡು ಜೀವನ ನಡೆಸುತ್ತಿದ್ದವು. ಆಗ ವಸಂತ ಮಾಸ. ಮಾವಿನ ಎಲೆ ಚಿಗುರುವ ಸಮಯ. ಅದರ ಸವಿಯ ಸವಿಯುತ ಕೋಗಿಲೆ ಹಾಡು ಹೇಳುತ್ತಿತ್ತು. ಅಳಿಲುಗಳು ರೆಂಬೆಯಿಂದ ರೆಂಬೆಗೆ ಓಡಾಡುತ್ತ ಕುಣಿಯುತ್ತಿದ್ದವು. ಮರಕುಟಿಕವು ಮರವನ್ನು ಕುಟುಕುತ್ತ ಹುಳುಗಳ ಹುಡುಕುತ್ತಿತ್ತು. ಆಗ ಕೋಗಿಲೆಯು "ಎಲೈ ಮರಕುಟಿಕವೇ... ಸಾಕು ಮಾಡು ನಿನ್ನ ಕಿರಿಕಿರಿ. ನನ್ನ ಸುಮಧುರ ಹಾಡಿಗೆ ತಡೆಯಾಗಬೇಡ..." ಎಂದಿತು. ಆಗ ಮರಕುಟಿಕವು ಕೋಗಿಲೆಗೆ ಗೊಣಗುತ್ತಾ ಹಾರಿಹೋಯಿತು. ಕೆಂಪಿರುವೆಗಳು ಸಾಲುಸಾಲಾಗಿ ಓಡಾಡುತ್ತ ತಮ್ಮ ಕೆಲಸದಲ್ಲಿ ತನ್ಮಯವಾಗಿದ್ದವು. ಅಲ್ಲೇ ಪಕ್ಕದಲ್ಲಿ ಝುಳುಝುಳು ಹರಿಯುವ ಸಣ್ಣನದಿಯು ಸಂಗೀತ ಹೊರಡಿಸುತ್ತಿತ್ತು. ಅದರ ಜೊತೆಗೆ ಜೋಡಿಗಿಳಿಗಳು ಕುಳಿತು ಏನೋ ಮಾತನಾಡುತ್ತಿದ್ದವು. ಕೋಗಿಲೆಗೆ ಹಾಡಲು ಮತ್ತೆ ತಡೆಯಾಯಿತು. ಆಗ ಕೋಗಿಲೆಯು "ಹೋಯ್ ಜೋಡಿ ಗಿಳಿಗಳೇ.. ನಿಮ್ಮ ಮಾತುಗಳನ್ನು ಬೇರೇಡೆ ಇಟ್ಟುಕೊಳ್ಳಿ.. ನನಗೆ ಮನಬಿಚ್ಚಿ ಹಾಡಬೇಕಿದೆ" ಎಂದಿತು. ಆಗ ಗಿಳಿಗಳು ಇದರ ಮಾತು ಕೇಳಿ "ಗೊಳ್..!!" ಎಂದು ನಕ್ಕವು. ಕೋಗಿಲೆಗೆ ಅವಮಾನವಾಯಿತು. ಸಹ್ಯ ಎನಿಸದೇ ಸಿಟ್ಟಿನಿಂದ ಬೇರೆಡೆಗೆ ಹಾರಿ ಹೋಯಿತು.
ಮರುದಿನ ಮತ್ತೆ ಅದೇ ಮರಕ್ಕೆ ಚಿಗುರೆಲೆಯ ತಿನ್ನಲು ಅದೇ ಕೋಗಿಲೆಯು ಆಗಮನವಾಯಿತು‌. ಆದರೆ ಮರವೆಲ್ಲ ಖಾಲಿ ಖಾಲಿ. ಆಗ ಗಿಳಿಗಳು ಇರಲಿಲ್ಲ ಬೇರೆ ಪಕ್ಷಿಗಳೂ ಇರಲಿಲ್ಲ. ಕೋಗಿಲೆಗೂ ಖುಷಿಯೋ ಖುಷಿ. ಹೊಟ್ಟೆ ತುಂಬಾ ಎಲೆಗಳ ತಿಂದು ಹಾಡಲು ಪ್ರಾರಂಭಿಸಿತು. ಕುಹೂ...ಕುಹೂ.. ದನಿಯು ಮುಗಿಲೆತ್ತರಕ್ಕೆ ತಾಗಿತು. ಆದರೆ, ಅದರ ದನಿಯು ಮರದ ಬುಡದಲ್ಲಿ ಮನೆ ಮಾಡಿಕೊಂಡಿದ್ದ ಸರ್ಪಕ್ಕೆ ಕರ್ಕಶವಾಗಿ ಕೇಳಿಸಿತು. ಬಹಳ ಕೋಪಬಂತು. ತನ್ನ ನಿದಿರೆಗೆ ಭಂಗ ತರುವ ಕೋಗಿಲೆಯ ಹಿಡಿದು ಸಾಯಿಸಬೇಕೆಂದು ಸರಸರನೆ ಮರವೇರಿತು. ಇದನ್ನು ಗಮನಿಸದ ಕೋಗಿಲೆಯು ತನ್ನ ಪಾಡಿಗೆ ಹಾಡುತ್ತಲೇ ಇತ್ತು. ಇನ್ನೇನು ಸನಿಹ ಬರಬೇಕು ಎನ್ನುವಷ್ಟರಲ್ಲಿ ಜೋಡಿ ಗಿಳಿಗಳು ಅದೇ ಕೊಂಬೆಯ ಮೇಲೆ ಬಂದು ಕುಳಿತವು. ಗಿಜಿಗಿಜಿ ಎಂದು ಸದ್ದು ಮಾಡತೊಡಗಿದವು. ಆಗ ಹಾವಿಗೆ ಭಯವಾಯಿತು‌. ಏನೂ ಮಾಡಲು ಸಾಧ್ಯವಿಲ್ಲ ಎಂದೆನಿಸಿ ಹಾವು ವಾಪಾಸ್ಸಾಯಿತು. ಇದನ್ನು ಗಮನಿಸಿದ ಕೋಗಿಲೆಗೆ ಹಾವನ್ನು ನೋಡಿ ಎದೆ ದಸಕ್ ಎಂದಿತು. ಅಲ್ಲದೇ ತನ್ನ ತಪ್ಪಿನ ಅರಿವಾಯಿತು. ತನ್ನ ಜೀವವನ್ನು ಉಳಿಸಿದ ಗಿಳಿಗಳಿಗೆ ನಮಸ್ಕರಿಸಿ ಅಲ್ಲಿಂದ ಹಾರಿಹೋಯಿತು.
ನೀತಿ: ‌ನೋಡಿದಿರಾ ಮಕ್ಕಳೇ‌. ನಮಗೆ ಎಲ್ಲ ಗೊತ್ತಿದೆ ,ನಾನೇ ಶ್ರೇಷ್ಠ ಎಂದು ಜಂಬ ಪಡಬಾರದು.ಅಹಂಕಾರ ಒಳ್ಳೆಯದಲ್ಲ.
.
.
ಕಥೆಗಾರ್ತಿ : ಸಿಂಧು ಭಾರ್ಗವ್. ಬೆಂಗಳೂರು ೨೧

ಮಕ್ಕಳ ನೀತಿ ಕಥೆ ತುಂಟ ಆನೆ ಮರಿ


ಮಕ್ಕಳ ಕಥೆ :೦೮ ತುಂಟ ಆನೆಮರಿ

ಒಂದು ಕಾಡಿನಲ್ಲಿ ತುಂಟ ಆನೆ ಮರಿ ಓಡಾಡುತ್ತ ಇತ್ತು. ಅದು ಯಾವಾಗಲೂ ಉಳಿದೆಲ್ಲ ಪ್ರಾಣಿಗಳಿಗೂ ಕೀಟಲೆ ಕೊಡುತ್ತಲೇ ಇರುತ್ತಿತ್ತು. ಯಾವ ಪ್ರಾಣಿಯಾದರೂ ಗದರಿಸಲು ಬಂದರೆ ಅಮ್ಮನ ಹತ್ತಿರ ಹೋಗಿ ದೂರು ನೀಡುತಲಿತ್ತು‌. ಆಗ ಅದರ ಅಮ್ಮ ದೊಡ್ಡ ಆನೆ ಬಂದು ಆ ಪ್ರಾಣಿಗೆ ಹೆದರಿಸಿ ಓಡಿಸಿಬಿಡುತ್ತಾ ಇತ್ತು. ಆ ದೊಡ್ಡ ಆನೆಯ ದೊಡ್ಡದೊಡ್ಡ ಕಾಲ್ಗಳು, ಮೊರದಗಲ ಕಿವಿಯಲ್ಲಿ ಪಟಪಟನೇ ಬೀಸಿದರೆ ಅದರ ಗಾಳಿಗೆ ಚಿಕ್ಕ ಪುಟ್ಟ ಮೊಲ ಹೆಗ್ಗಣಗಳೆಲ್ಲ ಗಾಳಿಯಲ್ಲಿ ತೇಲಿ ಹೋಗುತ್ತಲಿದ್ದವು. ದಪ್ಪ ದಪ್ಪ ಕಂಬದಂತಹ ಕಾಲಿನಿಂದ ತುಳಿದರೆ ಸಾಧಾರಣ ಜಾತಿಯ ಪ್ರಾಣಿಗಳೆಲ್ಲ ಸತ್ತೇ ಹೋಗುತ್ತಿದ್ದವು. ಅದಕ್ಕೆ ಆ ಮರಿಆನೆಗೆ "ನನ್ನ ಅಮ್ಮ ಇದ್ದಾಳೆ.." ಎಂಬ ಧೈರ್ಯವಿತ್ತು. ಅದಕ್ಕಾಗಿಯೇ ತುಂಟತನ ಮಾಡುತ್ತಿತ್ತು. ಎಲ್ಲರನ್ನೂ ಪೇಚಿಗೆ ಸಿಲುಕಿಸುತ್ತಾ ಇತ್ತು.
ಇದರಿಂದ ಬೇಸತ್ತ ಉಳಿದ ಪ್ರಾಣಿಗಳು ಆ ಮರಿಆನೆಗೆ ತಕ್ಕ ಪಾಠ ಕಲಿಸಬೇಕು ಎಂದು ಎಲ್ಲರೂ ಸಭೆ ಸೇರಿದರು. ಆಗ ಚಾಣಾಕ್ಷ ನರಿಯು ಒಂದು ಉಪಾಯ ನೀಡಿತು. "ತಿನ್ನುವುದರಲ್ಲಿ ತುಂಬಾ ಇಷ್ಟವಿರುವ ಆನೆಮರಿಗೆ ಅದರಿಂದಲೇ ಪಾಠ ಕಲಿಸುವ.." ಎಂದಿತು. ಉಳಿದೆಲ್ಲ ಪ್ರಾಣಿಗಳು ಆಯಿತು ಎಂದು ಒಪ್ಪಿಕೊ‌ಡವು. "ಆನೆಮರಿಯನ್ನು ಖೆಡ್ಡದಲ್ಲಿ ಬೀಳಿಸಲು ಯಾರು ಮುಂದೆ ಬರುತ್ತೀರಿ?"  ಎಂದು ಕೇಳಿತು‌ .ಆಗ "ಮೊಲವು ನಾನು... ಆ ಕೆಲಸ ಮಾಡುವೆ.." ಎಂದು ಒಪ್ಪಿಕೊಂಡಿತು. ಇನ್ನೊಮ್ಮೆ ನರಿ ಕೇಳಿತು "ಖೆಡ್ಡ ತೋಡಲು ಯಾರು ಮುಂದೆ ಬರುವಿರಿ..?" ಎಂದು. ಆಗ ಹೆಗ್ಗಣಗಳ ತಂಡವು ಮುಂದೆ ಬಂದು "ನಾವು ರೆಡಿ.." ಎಂದವು.
ರಾತ್ರಿಯಾಗುತ್ತಿದ್ದಂತೆಯೇ  ಹೆಗ್ಗಣಗಳ ತಂಡಕ್ಕೆ ಹೇಳಿ ದೊಡ್ಡ ಗುಂಡಿ ತೋಡಿಸಿದವು. ಅದರ ಮೇಲೆ ಸೊಪ್ಪು ಮುಚ್ಚಿ ಯಾರಿಗೂ ಕಾಣದಂತೆ ಮಾಡಿದವು.  ಎಲ್ಲವೂ ತಮ್ ತಮ್ಮ ಗೂಡಿಗೆ ವಾಪಾಸ್ಸಾದವು. ಬೆಳಿಗ್ಗೆ ಆಗುತ್ತಿದ್ದಂತೆ ಮರಿಆನೆ ಎಂದಿನಂತೆ  ಚೇಷ್ಟೆ ಮಾಡಿ, ಬೇರೆ ಪ್ರಾಣಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಖುಷಿ ಪಡೆಯಲು ಬಂದಿತ್ತು. ಕುಣಿಯುತ್ತ ಬರುತ್ತಿರುವ ಆನೆಮರಿಯನ್ನು ತಡೆದು ಚಾಣಾಕ್ಷ ಮೊಲವು "ಆನೆಮರಿ ಆನೆಮರಿ , ನಿನಗೆ ಸೊಪ್ಪು ಹಣ್ಣುಹಂಪಲು ಎಂದರೆ ತುಂಬಾ ಇಷ್ಟ ತಾನೆ.? ನಾವೆಲ್ಲರೂ ಸ್ನೇಹಿತರಲ್ಲವೇ.. ಹಾಗಾಗಿ ನಿನಗೆ ರಾಶಿರಾಶಿ ಹಣ್ಣು ಸೊಪ್ಪು ಕೊಡಬೇಕೆಂದುಕೊಂಡಿದ್ದೇವೆ. ನೀನು‌ ಬರಲೇಬೇಕು ಎಂದಿತು. ಆಗ ತಿನ್ನುವ ಆಸೆಗೆ ಬಿದ್ದು ಆನೆಮರಿ ಒಪ್ಪಿಕೊಂಡಿತು‌. ಕಾಡಿನಿಂದ ಬಹುದೂರವಿರುವ ಆ ಖೆಡ್ಡಾದ ಹತ್ತಿರ ಮೊಲವು ಕರೆದುಕೊಂಡು ಹೋಯಿತು. ಸ್ವಲ್ಪ ದೂರದಲ್ಲಿ ಇರುವಾಗಲೇ ಮೊಲವು ಆನೆಮರಿಗೆ ಹೇಳಿತು. "ಅಗೋ ನೋಡು ನಿನಗೆ ಬೇಕಾದ ಸೊಪ್ಪು ಹಣ್ಣುಹಂಪಲುಗಳಿವೆ. ಓಡಿಹೋಗಿ ತಿನ್ನು .." ಎಂದು.
ಇವರ ಮೋಸವರಿಯದ ಆನೆಮರಿ ಬಾಯಲ್ಲಿ ನೀರು ಸುರಿಸುತ್ತಾ ಓಡಿಓಡಿ ಸೊಪ್ಪು ತಿನ್ನಲು ಮುಂದಾಯಿತು. ಹಾಗೆ ತಿನ್ನುತ್ತಾ ತಿನ್ನುತ್ತಾ ಖೆಡ್ಡದೊಳಗೆ ದುಪಕ್ಕನೆ ಬಿದ್ದಿತು. ಉಳಿದ ಎಲ್ಲ ಪ್ರಾಣಿಗಳು "ಗೊಳ್" ಎಂದು ನಕ್ಕವು.
ನೀತಿ: ಇನ್ನೊಬ್ಬರನ್ನು ಪೇಚಿಗೆ ಸಿಲುಕಿಸಿ ಸಂತೋಷ ಪಡಬಾರದು. ಇಂದು ಅವರದಾದರೆ ನಾಳೆ ನಮ್ಮ ಸರದಿ ಬರುತ್ತದೆ.
.
.
ಕಥೆಗಾರ್ತಿ -ಸಿಂಧು ಭಾರ್ಗವ್ . ಬೆಂಗಳೂರು-೨೧ 

ಮಕ್ಕಳ ನೀತಿ ಕಥೆ ಅರಮನೆಯ ಅರಗಿಣಿ


ಮಕ್ಕಳ ಕಥೆ- ೦೭ ಅರಮನೆಯ ಅರಗಿಣಿ

ಒಂದು ಅರಮನೆಯಲ್ಲಿ ರಾಜ, ರಾಣಿ ತಮ್ಮ‌ ಮಕ್ಕಳ‌ ಜೊತೆಗೆ ಸುಖವಾಗಿದ್ದರು. ಐದು ಜನ ಮಕ್ಕಳಲ್ಲಿ ಕೊನೆಯವಳೇ ಹೆಣ್ಣುಮಗಳು. ಒಬ್ಬಳೆ ಹಾಗೂ ಕೊನೆಯ ಮಗಳಾದ ಕಾರಣ ಮುದ್ದಿನಿಂದ ಸಾಕಿ ಬೆಳೆಸುತ್ತಿದ್ದರು‌. ಹೆಸರು ಕನಕಕಲ್ಯಾಣಿ. ಊಟ-ನಿದಿರೆ ಎಲ್ಲವೂ ಅವಳ ಅಂತಃಪುರದೊಳಗೇ ನಡೆಯುತ್ತಿತ್ತು. ನೆಲದಲ್ಲಿ ಕಾಲಿಡಲೂ ಬಿಡುತ್ತಿರಲಿಲ್ಲ. ಪ್ರತಿಯೊಂದಕ್ಕೂ ಒಬ್ಬ ಕೆಲಸದಾಕೆ ಇದ್ದಳು. ಯುವರಾಣಿಯ ಯೋಗಕ್ಷೇಮ ನೋಡಿಕೊಳ್ಳುತ್ತಾ ಹೊರಗಿನ ಆಗುಹೋಗುಗಳನ್ನು ತಿಳಿಸಲು ತಂತಿಯಾಗಿದ್ದಳು. ಅವಳ ಕೋಣೆಯೊಳಗೆ ಕೇಳಿದ್ದೆಲ್ಲವೂ ಬರುತ್ತಿತ್ತು. ಹಾಗಾಗಿ ಯುವರಾಣಿಗೆ ಹೊರಗಿನ ಪ್ರಪಂಚದ ಅರಿವೇ ಇರಲಿಲ್ಲ. ಎಲ್ಲವನ್ನೂ ಕೇಳಿ ತಿಳಿದುಕೊಂಡಿದ್ದಳೇ ವಿನಃ ನೋಡಿ, ಅನುಭವಿಸಿ ಖುಷಿ ಪಟ್ಟವಳಲ್ಲ‌. ಹೀಗೆ ಒಮ್ಮೆ ಕೆಲಸದಾಕೆ ತನ್ನ ಗಂಡನ ಬಗ್ಗೆ, ಅವಳ ಊರಿನ ಬಗ್ಗೆ ಪರಿಪರಿಯಾಗಿ ವಿವರಿಸುತ್ತಾ ಇದ್ದಳು. ಆಗ ಯುವರಾಣಿ ಕನಕಕಲ್ಯಾಣಿಗೂ ಅವಳ ಊರು ನೋಡುವ ಆಸೆಯಾಯಿತು‌. "ಈ ದಿನ ನಾನೂ ಬರುವೆ, ನಿಮ್ಮ ಊರಿಗೆ ಕರೆದುಕೊಂಡು ಹೋಗು.." ಎಂದು ಕೇಳಿದಳು. ಆದರೆ ಸಖಿಗೆ ಒಮ್ಮೆಗೆ ಎದೆ 'ದಗ್' ಎಂದು ಭಯವಾಯಿತು‌.
"ಏನಿದು ಹುಚ್ಚು ಬಯಕೆ. ಮಹಾರಾಜರಿಗೆ ಈ ವಿಷಯ ತಿಳಿದರೆ ನನ್ನ ಕೊಂದೇ ಬಿಡುವರು... ಇಲ್ಲ.. ಇಲ್ಲ.. ನಾನು ಕರೆದುಕೊಂಡು ಹೋಗಲಾರೆ.‌." ಎಂದು ಕೋಣೆಯಿಂದ ಓಡಿಹೋದಳು.
ಯುವರಾಣಿಗೆ ಮನದಲ್ಲಿ ಬೇಸರದ ಛಾಯೆ ಮೂಡಿತು‌. ಸಮಾಧಾನ ಮಾಡಿಕೊಂಡಳು. ಸುಮ್ಮನಾದಳು. ಮರುದಿನವೂ ಕೆಲಸದಾಕೆ ಬಂದು ಎಲ್ಲ ಕೆಲಸವನ್ನೂ ಮಾಡುತ್ತ ನಡುನಡುವೆ ಆ ದಿನ ನಡೆದ ಎಲ್ಲ ಕಥೆಯನ್ನು ವಿವರಿಸಿ ಹೇಳಿದಳು. ತಮಾಷೆಯ ವಿಷಯಗಳ ಹಂಚಿಕೊಂಡು ನಗಿಸಿದಳು. ಆಗ ಯುವರಾಣಿಗೆ ಮತ್ತೆ ಆಸೆ ಚಿಗುರಿತು. "ದಯಮಾಡಿ ನನ್ನ  ಕರೆದುಕೊಂಡು ಹೋಗು‌,ಹೊರಗಡೆ ಸುತ್ತಾಡಿಕೊಂಡು ಬರುವ ಬಯಕೆಯಾಗಿದೆ..." ಎಂದು ಒತ್ತಾಯಿಸಿದಳು. ಆಗಲೂ ಕೆಲಸದಾಕೆ "ಇಲ್ಲ..ಇಲ್ಲ ..." ಎಂದು ಓಡಿಹೋದಳು. ಹೀಗೆ ಒಂದು ವಾರದ ನಡೆಯಿತು. ಕೊನೆಗೆ ಒಂದು ದಿನ ಕೆಲಸದಾಕೆ ಕೆಲಸ ಮಾಡುತ್ತಿರುವಾಗ ಯುವರಾಣಿ, "ಹೇಳು. ಇಂದಾದರೂ ನಿನ್ನ ಊರಿಗೆ ಕರೆದುಕೊಂಡು ಹೋಗುವಿಯೇನು?" ಎಂದು ಕೇಳಿದಳು. ಆಗಲೂ ಇಲ್ಲವೆಂದೇ ಉತ್ತರ ಬಂತು. ಅವಳು ರಾಜನ ಮೇಲಿನ ಭಯದಿಂದ ಓಡಿಹೋದಾಗ ಯುವರಾಣಿ ತನ್ನ ರಾಣಿಯ ಪೋಷಾಕು ತೆಗೆದು ಹರಿದುಹೋದ ಚಿಂದಿಬಟ್ಟೆ ಧರಿಸಿ ಮುಖಕ್ಕೆ ಪರದೆ ಹಾಕಿಕೊಂಡು ತನ್ನ ಕೋಣೆಯ ದೊಡ್ಡ ಕಿಟಕಿಯಿಂದ ಕೆಳಗಿಳಿದು ಸಖಿಯನ್ನೇ ಹಿಂಬಾಲಿಸಿದಳು. ಈ ವಿಷಯ ಯಾರಿಗೂ ಗೊತ್ತೇ ಆಗಲಿಲ್ಲ. ರಾಜನು ತನ್ನ ದರ್ಬಾರಿನಲ್ಲಿ ತಲ್ಲೀನನಾಗಿದ್ದನು. ಯುವರಾಣಿ ಮನೆ ಕೆಲಸದವಳನ್ನೇ ಹಿಂಬಾಲಿಸಿ ಅವಳ ಊರು ತಲುಪಿದಳು.
ಅಲ್ಲಿ ನೋಡಿದರೆ ಗುಡಿಸಲಿನ ಮನೆಯೊಂದಿತ್ತು. ಮನೆಯೊಳಗೆ ಕೆಲಸದವಳು ಮತ್ತು ಅವಳ ಗಂಡನಿದ್ದ‌. ಕುಡಿದ ಅಮಲಿನಲ್ಲಿ ಮಲಗಿದ್ದ.  ಯುವರಾಣಿ ಆ ಮನೆಯವರನ್ನು ಮಾತನಾಡಿಸಬೇಕು ಎಂದು ದೂರದಿಂದಲೇ ಕೂಗಿ ಕರೆದಳು. ಆಗ ಕೆಲಸದಾಕೆ ಹೊರಬಂದು "ಯಾರು..?ಯಾರು ಬೇಕು..? ಎಂದು ಕೇಳಿದಳು. "ನಾನು ಈ ಊರಿಗೆ ಅಪರಿಚಿತೆ. ತುಂಬಾ ಬಾಯಾರಿಕೆ ಆಗುತ್ತಿದೆ. ನೀರು ಕೊಡುವಿರಾ?" ಕೇಳಿದಳು. ಆಯ್ತು. ಎಂದು ಒಳಗೆ ಹೋಗಿ ನೀರು ತಂದು ಕುಡಿಯಲು ನೀಡಿದಳು. ದಣಿವಾರಿಸಿಕೊಂಡ ಮೇಲೆ ಮತ್ತೆ ಯುವರಾಣಿ "ತುಂಬಾ ದೂರದಿಂದ ಬಂದಿದ್ದೇನೆ, ನನಗೆ ತುಂಬಾ ಹೊಟ್ಟೆ ಹಸಿವಾಗುತ್ತಿದೆ. ಊಟ ಕೊಡುವಿರಾ?'' ಕೇಳಿದಳು.
ಆಗ ತನಗಾಗಿ ತೆಗೆದಿಟ್ಟಿದ್ದ ನಿನ್ನೆಯ ಅನ್ನವನ್ನು  ಬಿಸಿ ಮಾಡಿ ತಂದು ಊಟಕ್ಕೆ ಬಡಿಸಲು ಮುಂದಾದಳು.
ಯುವರಾಣಿ "ನೀವು ಬನ್ನಿ, ಜೊತೆಗೆ ಊಟ ಮಾಡೋಣ.." ಎಂದಳು
"ಇಲ್ಲ .. ನೀವು ಅತಿಥಿಗಳು. ನೀವೇ ಮೊದಲು ಊಟ ಮಾಡಿ.." ಎಂದಳು.
ಕೊನೆಗೆ ಒತ್ತಾಯಪೂರ್ವಕವಾಗಿ ತನಗೆ ಹಾಕಿದ ಸ್ವಲ್ಪ ಅನ್ನವನ್ನೇ ಅವಳ ತಟ್ಟೆಗೂ ಬಡಿಸಿ ಜೊತೆಗೆ ಕೂತು ಊಟ ಮಾಡಿದರು‌.
ಯುವರಾಣಿ ನಿಧಾನಕ್ಕೆ ಮಾತಿಗಿಳಿದು "ನೀವು ಜೀವನ ಸಾಗಿಸಲು ಏನು ಕೆಲಸ ಮಾಡಿಕೊಂಡಿದ್ದೀರಿ.. ಎಂದು ಕೇಳಿದಳು‌.
"ನಾನು ನಮ್ಮೂರ ರಾಜರ ಅರಮನೆಯಲ್ಲಿ ಯುವರಾಣಿಗೆ ಸೇವಕಿಯಾಗಿರುವೆ. ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವ, ಬೇಕು ಬೇಡಗಳ ತಂದುಕೊಡುವ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ಬೆಳಿಗ್ಗಿನ ತಿಂಡಿ, ಮಧ್ಯಾಹ್ನದ ಊಟ ಮುಗಿಸಿ ಸಂಜೆ ತನಕವೂ ಕೆಲಸ ಮಾಡಿ, ಯುವರಾಣಿಯ ಜೊತೆಗೆ ಒಂದಷ್ಟು ಹರಟೆ ಹೊಡೆದು ಈಗ ವಾಪಾಸ್ಸಾದೆ‌..." ಎಂದಳು.
"ಹಾಗಾದರೆ ರಾಜರು ನಿಮಗೆ ದುಡಿಮೆಗೆ ಹಣ ಕೊಡುವುದಿಲ್ಲವೇ.." ಎಂದು ಕೇಳಿದಳು.
ಆಗ "ಇಲ್ಲ.. ಊಟಕ್ಕೆ ಕೊಡುತ್ತಿದ್ದಾರಲ್ಲ‌ ಅಷ್ಟೇ. ನನ್ನ ಗಂಡ ಕುಡಿಯಲು ಸಾಲ ಕೇಳುವ. ಅದನ್ನೇ ನನ್ನ ಸಂಬಳದಲ್ಲಿ ವಸೂಲು ಮಾಡಿಕೊಳ್ಳುವರು‌..." ಎಂದಳು.
ಯುವರಾಣಿಗೆ ಬೇಸರವಾಯಿತು. ರಾತ್ರಿಯಾದ ಕಾರಣ ನಾನಿಲ್ಲೆ ಮಲಗುವೆ ಎಂದಳು. ಅವಳು ಒಪ್ಪಿ ಹರಿದುಹೋದ ಹೊದಿಕೆ , ಚಾಪೆ ನೀಡಿದಳು. ಬಡವಿಯ ಮನೆಯ ಗುಡಿಸಲಿನಿಂದ ಚಂದಿರನ ಬೆಳದಿಂಗಳು ಮೈಮೇಲೆ ಚೆಲ್ಲುತ್ತಿತ್ತು. ಅದನ್ನೆಲ್ಲ ಎಂದೂ ನೋಡದ ಯುವರಾಣಿಯು  ಖುಷಿಪಟ್ಟಳು. ಅಂಗಳದಲ್ಲಿ ಕುಣಿದಾಡಿದಳು. ಹಾಡು ಹೇಳಿದಳು. ಹಾಗೆಯೇ ಒಳ ನಡೆದು ಕಣ್ತುಂಬಾ ನಿದಿರೆ ಮಾಡಿದಳು.
ಕೋಳಿ ಕೂಗಿ, ಸೂರ್ಯ ಬಂದ. ಬೆಳಗಾಯಿತು‌‌‌. ಮನೆ ಕೆಲಸದವಳು ಬೇಗನೆ ಎದ್ದು ಅರಮನೆಗೆ ಕೆಲಸಕ್ಕೆ ಹೊರಟಳು. ಇವಳಿಗೂ ಎಚ್ಚರವಾಯಿತು‌‌. ತಾನೂ ಜೊತೆಗೆ ಬರುವೆ  ಎಂದು ಹೊರಡಲು ಸಿದ್ದತೆ ಮಾಡಿಕೊಂಡಳು. ಜೊತೆಯಾಗಿ ಅರಮನೆ ಸೇರಿದರು. ಅಲ್ಲಿದ್ದ ಭಟರು ಇವರನ್ನು ನೋಡಿ ವಿಶೇಷವಾದ ಗೌರವ ನೀಡಿದರು. ಸೇವಕಿಗೆ ಏಕೆಂದು ಅರ್ಥವಾಗಲಿಲ್ಲ. ಆದರೆ
ಕೆಲಸದವಳ ಜೊತೆಗೆ ತನ್ನ ಮಗಳನ್ನು ನೋಡಿದ ಮಹಾರಾಜನಿಗೆ ಕೋಪ ಬಂದಿತು. "ನೀನು ಎಲ್ಲಿಗೆ ಹೋಗಿದ್ದಿ?? ಈ ಕೆಲಸದವಳು ನಿನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಳು" ಎಂದು ದಬಾಯಿಸಿದನು.
ಅಲ್ಲಿಯ ತನಕವೂ ಕೆಲಸದವಳಿಗೆ ಯುವರಾಣಿ ತನ್ನ ಜೊತೆಗೆ, ತನ್ನ ಮನೆಯಲ್ಲಿ ಒಂದು ರಾತ್ರಿ ತಂಗಿದ್ದಳು ಎಂದು ತಿಳಿದೇ ಇರಲಿಲ್ಲ. ಅವಳಿಗೂ ಅಚ್ಚರಿ ಬಡಿದು ದಂಗಾಗಿ ನಿಂತಳು. ಆಗ ಯುವರಾಣಿ ರಾಜನಿಗೆ ಎದುರುವಾದಿಸಿ ಮಾತಿಗಿಳಿದಳು.
"ಪಿತಾಜಿ.. ನಾನು‌ ನಿಮ್ಮ ಒಬ್ಬಳೇ ಮುದ್ದಿನ‌ ಮಗಳು ಎಂದು ಹೊರಗಡೆ ಎಲ್ಲೂ ಹೋಗದ ಹಾಗೆ ನೋಡಿಕೊಂಡಿರಿ. ನನಗೆ ಬೇಕು ಬೇಡದ್ದನ್ನೆಲ್ಲ ನನ್ನ ಕೋಣೆಗೆ ತರಿಸಿ ಕೊಡುತ್ತಿದ್ದೀರಿ. ಆದರೆ ಈ ಸುಂದರವಾದ ಪ್ರಕೃತಿಯನ್ನು ನಾನು‌ ನೋಡಲೇ ಇಲ್ಲ. ನನಗೂ ಆಸೆಯಾಗಿ ನಾನು ಇವಳಿಗೂ ತಿಳಿಸದೇ ಅವಳ ಊರಿಗೆ ಹೋಗಿ ಬಂದೆ. ಒಂದು ರಾತ್ರಿ ಅವಳ ಮನೆಯಲ್ಲೇ ಇದ್ದೆ‌. ಅವಳ ಹರಕು ಗುಡಿಸಲಿನಲ್ಲೇ ಕಣ್ತುಂಬಾ ನಿದಿರೆ ಮಾಡಿದೆ. ಅಲ್ಲದೇ ನನ್ನ ಇಷ್ಟು ಚೆನ್ನಾಗಿ ವೈಭೋಗದಿಂದ ನೋಡಿಕೊಳ್ಳುವ ನೀವು, ನನ್ನ ಕೆಲಸಕ್ಕೆ ಬರುವ ನನ್ನ ಗೆಳತಿಗೆ ಏಕೆ ಸರಿಯಾದ ಹಣ ಕೊಡುತ್ತಿಲ್ಲ. ಅವಳು ಗುಡಿಸಲಿನಲ್ಲಿ ಬದುಕು ನಡೆಸುತ್ತಾ ಇದ್ದಾಳೆ. ನಿನ್ನೆಯ ಅನ್ನವನ್ನು ಊಟ ಮಾಡುತ್ತಾಳೆ. ಚಿಂದಿಬಟ್ಟೆ ತೊಡುತ್ತಾಳೆ.
ಪಿತಾಜಿ.. ಇಂದಿನಿಂದ ಅವಳು ನಮ್ಮ ಅರಮನೆಯಲ್ಲಿಯೇ ಇರಲಿ. ನನ್ನ ಜೊತೆಗೇ ಇರಬೇಕು. ಇದು ನನ್ನ ಕಟ್ಟಾಜ್ಞೆ...!!" ಎಂದು ಹೇಳಿ ಕೋಪದಿಂದಲೇ ತನ್ನ ಅಂತಃಪುರಕ್ಕೆ ನಡೆದಳು.
ಮಗಳ ಮಾತಿಗೆ ಮರು ನುಡಿಯಲಾಗಲಿಲ್ಲ. ರಾಜ ಆತ್ಮಾವಲೋಕನದಲ್ಲಿ ತೊಡಗಿದ. ಕೊನೆಗೆ ಕೆಲಸದಾಕೆಯನ್ನೂ ಅರಮನೆಯಲ್ಲೇ ಇರಲು ಹೇಳಿದ. ಸೇವಕಿಯ ಜೊತೆಗೆ ಊರೆಲ್ಲ ಸುತ್ತಾಡಲು ಪ್ರಾರಂಭಿಸಿದಳು. ಸೈನಿಕರು ರಕ್ಷಣೆಗೆ ಜೊತೆಗಿದ್ದರು. ಯುವರಾಣಿಯು ಖುಷಿಯಾಗಿ ಜೀವನ ನಡೆಸಲು ಪ್ರಾರಂಭಿಸಿದಳು.
.
.
ಬರೆದವರು: ಸಿಂಧು ಭಾರ್ಗವ್ ..ಬೆಂಗಳೂರು-೨೧

ಮಕ್ಕಳ ನೀತಿ ಕಥೆ ಜೊತೆಗಾರ


ಮಕ್ಕಳ ಕಥೆ: ೦೬ ಜೊತೆಗಾರ

ಬೆಟ್ಟದ ಮೇಲೊಂದು ವೃದ್ಧ ದಂಪತಿಯ ಮನೆಯಿತ್ತು. ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದರೂ ಸಂಜೆಯಾಗುತ್ತಿದ್ದಂತೇ ಏನೋ ಒಂದು ರೀತಿಯ ಬೇಸರ ಅವರನ್ನು ಕಾಡುತ್ತಿತ್ತು. ಹಾಗಾಗಿ ಮನೆ ಎದುರಿಗೆ ಕೊಳವೊಂದನ್ನು ನಿರ್ಮಾಣ ಮಾಡಿದರು. ಅದರಲ್ಲಿ ಈಜಲು ಜೋಡಿ ಹಂಸಗಳನ್ನು ತಂದು ಸಾಕಿದರು. ಅವುಗಳ ಆಟಪಾಠ ನೋಡಿ ಖುಷಿಪಡುತ್ತಿದ್ದರು. ತಾವೂ ಅವುಗಳ ಜೊತೆಗೆ ಆಟವಾಡುತ್ತಾ ಸಂಜೆ ಕಳೆಯುತ್ತಿದ್ದರು. ಒಮ್ಮೆ ಅನಾಹುತ ನಡೆದೇ ಹೋಯಿತು‌. ಕತ್ತಲಾ ರಾತ್ರಿಯಲಿ ಕಾಡಿನಿಂದ ನರಿಯೊಂದು ಬಂದು ಕೊಳದಲ್ಲಿದ್ದ ಹಂಸವೊಂದನ್ನು ಕಚ್ಚಿಕೊಂಡು ಹೋಯಿತು. ಇನ್ನೊಂದು ಹಂಸ ಎಷ್ಟು ಬಿಡಿಸಿ ಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮುಂಜಾನೆ ಎದ್ದು ಎಂದಿನಂತೆ ವೃದ್ಧ ದಂಪತಿಗಳು ಕೊಳದ ಬಳಿ ಬಂದಾಗ ಅಚ್ಚರಿ ಕಾದಿತ್ತು. ಅಲ್ಲಿ ಒಂದೇ ಹಂಸವಿರುವುದು ನೋಡಿ ಭಯವಾಯಿತು. "ರೆಕ್ಕೆ ಪುಕ್ಕಗಳೆಲ್ಲ ಕಾಡುದಾರಿ ತುಂಬಾ ಚೆಲ್ಲಿರುವುದು ನೋಡಿ ಇದು ಕಾಡುಪ್ರಾಣಿಯದೇ ಕೆಲಸ, ನಮ್ಮ ಹಂಸವನ್ನು ಹೊತ್ತುಕೊಂಡು ಹೋಗಿದೆ.." ಎಂಬ ಅರಿವಾಯಿತು. ಆದರೆ ಇತ್ತ ಉಳಿದ ಒಂದು ಹಂಸಕ್ಕೆ ಬೇಸರದ ಛಾಯೆ ಮೂಡಿತು. ಒಂಟಿತನ ಕಾಡತೊಡಗಿತು. ಇದನ್ನು ಗಮನಿಸಿದ ಅಜ್ಜ ಪೇಟೆಗೆ ಹೋಗಿ ಆ ಒಂದು ಹಂಸವನ್ನು ಪುಟ್ಟ ಮಗುವಿಗೆ ಮಾರಾಟ ಮಾಡಿದರು. ತಿರುಗಿ ಬರುವಾಗ ಜೋಡಿ ಬೆಕ್ಕುಗಳನ್ನು ಕೊಂಡು ತಂದರು‌.
ಅಜ್ಜಿಗೆ ಎಲ್ಲಿಲ್ಲದ ಸಂತಸವಾಯಿತು. ಹಾಗೆಯೇ ಬೆಕ್ಕುಗಳ ಜೊತೆಗೆ ಆಟವಾಡುತ್ತ ದಿನ ಕಳೆಯಲು ಶುರುಮಾಡಿದರು. ಅವುಗಳಿಗೆ ದಿನವೂ ಹಾಲು ಬ್ರೆಡ್ ತಿನ್ನಲು ಕೊಡುತ್ತಿದ್ದರು. ಜೊತೆಗೆ ಪೇಟೆಯಿಂದ ಒಂದಷ್ಟು ಒಣಮೀನು ತಂದಿಟ್ಟುಕೊಂಡಿದ್ದರು. ಅದನ್ನೂ ದಿನವೂ ತಿನ್ನಲು ಕೊಡುತ್ತಿದ್ದರು‌. ಹೀಗಿರುವಾಗ ನೆಮ್ಮದಿಯ ಜೀವನ ಸಾಗುತಲಿತ್ತು. ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಏನೋ ಒಮ್ಮೆ ಬೆಕ್ಕು ಕಾಡಿಗೆ ಹೋಗಿದ್ದಾಗ ಅಲ್ಲಿದ್ದ ಗೂಬೆಯೊಂದು ಬೆಕ್ಕಿನ ಮೇಲೆ ದಾಳಿ ಮಾಡಿತು. ಬೆಕ್ಕು ಉಸಿರೊಂದು ಉಳಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಓಡೋಡಿ ಮನೆಯಂಗಳ ತಲುಪುತ್ತದೆ. ಅಷ್ಟರಲ್ಲೇ ಅದರ ಪ್ರಾಣ ಹಾರಿಹೋಯಿತು. ಆಗ ಅಜ್ಜಿಗೆ ಎಲ್ಲಿಲ್ಲದ ಆಘಾತವಾಗುತ್ತದೆ. ಉಳಿದ ಒಂದು ಬೆಕ್ಕಿಗೂ ತನ್ನ ಮಿತ್ರನ ಕಳೆದುಕೊಂಡ ನೋವು ಬಹುವಾಗಿ ಕಾಡಲು ಶುರುವಾಯಿತು. ಸರಿಯಾಗಿ ಏನೂ ತಿನ್ನದೇ ಸಾಯುವ ಸ್ಥಿತಿಗೆ ತಲುಪಿತು. ಹೀಗಿರುವಾಗ ಅಜ್ಜ ಮತ್ತೆ ಪೇಟೆಗೆ ಹೋಗಿ ಆ ಉಳಿದ ಒಂದು ಬೆಕ್ಕನ್ನೂ ಮಾರಲು ಮುಂದಾಗುತ್ತಾನೆ.
ಆಗ ಮಾರುಕಟ್ಟೆಯಲ್ಲಿ ಒಬ್ಬ ಹುಡುಗಿ ಕೆಲಸ ಕೇಳುತ್ತಾ ಅಂಗಡಿ ಬಾಗಿಲಿನಲ್ಲಿ ನಿಂತಿದ್ದಳು. ಅವಳನ್ನು ನೋಡಿ ಅಜ್ಜನು ಕರೆದು "ನೀನು ಯಾರು? ನಿನಗೆ ಅಪ್ಪ ಅಮ್ಮ ಯಾರೂ ಇಲ್ಲವೇ? ಸ್ಕೂಲಿಗೆ ಹೋಗುವುದಿಲ್ಲವೇ...? ಇಲ್ಲಿ ಏಕೆ ತಿರುಗುತ್ತಾ ಇದ್ದೀಯಾ..." ಎಂದು ಪ್ರಶ್ನಿಸುವನು. ಆಗ ಆ ಹುಡುಗಿ "ನಾನು ಲಿಲ್ಲಿ. ನಾನೊಬ್ಬಳು ಅನಾಥೆ. ನನಗೆ ಯಾರೂ ಇಲ್ಲ. ನಾನು ಸ್ಕೂಲಿಗೂ ಹೋಗುತ್ತಿಲ್ಲ. ಭಿಕ್ಷೆ ಬೇಡಲು ನನಗೆ ಇಷ್ಟವಿಲ್ಲ. ಹಾಗಾಗಿ ಯಾರಾದರೂ ಕೆಲಸ ಕೊಟ್ಟರೆ ಮಾಡುವೆನು. ನನಗೆ ಓದಬೇಕೆಂದು ತುಂಬಾ ಆಸೆಯಿದೆ. ಶಾಲೆಗೂ ಹೋಗಬೇಕೆಂಬ ಬಯಕೆಯಿದೆ..." ಎಂದು ತನ್ನ ಕಥೆಯನ್ನೆಲ್ಲ ಹೇಳುವಳು. ಅಜ್ಜನಿಗೆ ಎಲ್ಲಿಲ್ಲದ ಸಂತಸವಾಯಿತು. "ನಮ್ಮ ಮನೆಗೆ ಬರುವೆಯಾ? ಅಲ್ಲಿ ಅಜ್ಜಿ ಇದ್ದಾರೆ, ಅವರಿಗೆ ಸಹಾಯ ಮಾಡಿಕೊಂಡು ಇರಬಹುದು. ಓದಬಹುದು. ಅಲ್ಲಿ ತೋಟ, ಕೊಳ, ಹೂದೋಟ ಎಲ್ಲಾ ಇದೆ.ಸುಂದರ ಪ್ರಕೃತಿಯಿದೆ. ನನ್ನ ಜೊತೆ ಬರುವೆಯಾ...??" ಎಂದನು. ಲಿಲ್ಲಿಯು ಖುಷಿಯಿಂದ ಒಪ್ಪಿದಳು. ಜೊತೆಗೆ ಮಾರಲು ತಂದ ಬೆಕ್ಕನ್ನೂ ಅಜ್ಜ ವಾಪಾಸು ಮನೆಗೆ ಕರೆದುಕೊಂಡು ಹೋದನು. ನಂತರ ಲಿಲ್ಲಿ, ಅಜ್ಜ -ಅಜ್ಜಿಗೆ ಸಹಾಯ ಮಾಡಿಕೊಂಡು ಅವರ ಉದ್ಯಾನವನ, ತರಕಾರಿ ತೋಟದಲ್ಲಿ ಕೆಲಸ ಮಾಡಿಕೊಂಡು ಲವಲವಿಕೆಯಿಂದ ಓಡಾಡಿಕೊಂಡಿದ್ದಳು. ಬೆಕ್ಕೂ ಕೂಡ ಜೊತೆಗಿತ್ತು. ಹೀಗೆ ಎಲ್ಲರೂ ಖುಷಿಖುಷಿಯಿಂದ ಜೀವನ ನಡೆಸುತ್ತಿದ್ದರು.
.
.
ಕಥೆಗಾರ್ತಿ: ಸಿಂಧು ಭಾರ್ಗವ್. ಬೆಂಗಳೂರು-೨೧

ಮಕ್ಕಳ ನೀತ ಕಥೆ ಆತ್ಮಾವಲೋಕನ


ಮಕ್ಕಳ ಕಥೆ : ೦೫ ಆತ್ಮಾವಲೋಕನ

ಒಮ್ಮೆ ಒಂದು ಕಾಗೆ  ಹಾರುತ್ತ ಹೋಗುವಾಗ ಕೋಗಿಲೆಯು ಒಂದು ಮರದಲ್ಲಿ ಕುಳಿತು ಹಾಡುವುದು ಕಾಣಿಸಿತು. ಆಗ ಕೋಗಿಲೆ ಬಳಿ ಹೋಗಿ, "ನೀನೆಷ್ಟು ಸುಂದರವಾಗಿ , ಇಂಪಾಗಿ ಹಾಡುವೆ. ನಿನ್ನ ದನಿಗೆ ಮನಸೋಲುವವರೇ ಇಲ್ಲ. ನಾನು ಹಾಡಿದರೆ ಎಲ್ಲರೂ ಶು..ಶು.. ಎಂದು‌ ಓಡಿಸಿ ಬಿಡುವರು. ನನಗೂ ನಿನ್ನ ಹಾಗೆಯೇ ಹಾಡಬೇಕು ಎನು ಮಾಡುವುದು"?? ಎಂದಿತು.
ಆಗ ಕೋಗಿಲೆಯು " ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು.. ಎಂದಿತು.
ಕಾಗೆಗೆ ಬೇಸರವಾಗಿ .. "ಹೋಗು.. ನಿನ್ನ ಜೊತೆ ಮಾತನಾಡೋದಿಲ್ಲ.. ಎಂದು ಹಾರಿಹೋಯಿತು.
ಹೀಗೆ ಮುಂದಕ್ಕೆ ಹೋಗುವಾಗ ಚಿವ್..ಚಿವ್.. ಅಳಿಲು ಹಾಡುತ್ತ ಮರದಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಕುಣಿಯುತ್ತಿತ್ತು. ಆಗ ಕಾಗೆಯು ಅಳಿಲಿನ ಬಳಿ ಹೋಗಿ " ಅಳಿಲಣ್ಣ ಅಳಿಲಣ್ಣ, ನಿನ್ನ ಬೆನ್ನ ಮೇಲೆ ಅದೆಷ್ಟು ಸುಂದರ ಗೆರೆಗಳಿವೆ. ಆ ಮೂರುಗೆರೆಗಳು ಎಷ್ಟು ಚೆನ್ನಾಗಿ ಹೊಳೆಯುತ್ತಲಿವೆ. ಎಲ್ಲರ ಕಣ್ಣುಗಳ ಸೆಳೆಯುತ್ತಲಿವೆ. ನನಗೂ ಆ ಮೂರು ಗೆರೆಗಳು ಬೇಕು. ನನ್ನ ಬೆನ್ನಿಗೂ ಹಚ್ಚುವೆಯಾ.. ಎಂದಿತು.
ಆಗ ಅಳಿಲು " ಅಯ್ಯೋ.. ಹುಚ್ಚಿ!! " ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು.. ಎಂದಿತು.
ಕಾಗೆಗೆ ಬೇಸರವಾಗಿ .. "ಹೋಗು.. ನಿನ್ನ ಜೊತೆ ಮಾತನಾಡೋದಿಲ್ಲ.. ಎಂದು ಹಾರಿಹೋಯಿತು.
ಮತ್ತೆ ಹಾರುತ್ತ ಮುಂದೆ ಹೋಗುವಾಗ ನವಿಲೊಂದು ಗರಿಬಿಚ್ಚಿ ನರ್ತನ ಮಾಡುತ್ತಲಿತ್ತು. ಅದನ್ನು ನೋಡಿ ಕಾಗೆಗೆ ಆದ ಸಂತೋಷ ಅಷ್ಟಿಷ್ಟಲ್ಲ. ನನಗೂ ಈ ರೆಕ್ಕೆ ಕೊಡು. ನಾನೂ ಕುಣಿಯುವೆ.. ಎಂದು ಓಡಿಓಡಿ ಹೋಗಿ ನವಿಲನ್ನು ಕೇಳಿತು. ಆಗ ನವಿಲು ನಿನಗೆ ಈ ಗರಿಗಳು ಹೊಂದುವುದಿಲ್ಲ. ಅಂಟಿಸಿದರೂ ಅದೂ ಬಿದ್ದು ಹೋಗಿ ನಗೆಪಾಟಲಿಗೆ ಬೀಳುವೆ. ಬೇಡ ಬಿಡು. ಮುಂದಕ್ಕೆ ಹೋಗು ಎಂದಿತು.  ಆಗ ಕಾಗೆಗೆ ಕಣ್ಣೀರು ಉಕ್ಕಿ ಬಂತು. ಅಳಲು ಶುರುಮಾಡಿತು.
ಹೀಗೆ ಮುಂದೆ ಹೋಗುವಾಗ ಊರಿನ ಹಾದಿ ಬಂದಿತು. ಅಲ್ಲಿನ ಪುಟ್ಟ ಕೊಳದಲ್ಲಿ ಶ್ವೇತ ವರ್ಣದ ಹಂಸಗಳು ನಯವಾಗಿ ಶೀತಲ ತಿಳಿನೀರಿನಲ್ಲಿ ವಿಹರಿಸುತ್ತಾ ಇದ್ದವು. ಅವುಗಳಿಗೆ ಮರಿಗಳೂ ಜೊತೆಯಾಗಿದ್ದವು. ಅದನ್ನು ಕಂಡು, "ಛೇ!! ನನ್ನ ಬಣ್ಣ ಎಷ್ಟು ಕಪ್ಪಗಿದೆ. ಹಂಸಗಳಂತಾಗಲು ಏನು ಮಾಡಬೇಕು? ಹೋ ನೀರಿನಲ್ಲೇ ಇರಬೇಕೇನೋ , ನನ್ನ ಬಣ್ಣವೂ ಬಿಳಿಯಾಗಬಹುದು" ... ಎಂದೆನಿಸಿ ನೀರಿಗೆ ಧುಮುಕಿತು. ಅದನ್ನು ಕಂಡು ಹಂಸವು ನೀನೇಕೆ ಬಂದಿರುವೆ, ಹೋಗುಹೋಗು ನನ್ನ ಮರಿಗಳಿಗೆ ಭಯವಾಗುತ್ತದೆ... ಎಂದು ಹೋಗಲು ಹೇಳಿತು‌ .ಆಗ ಕಾಗೆಯಕ್ಕ "ಇಲ್ಲ ,‌ನನಗೂ ನಿನ್ನಂತೆ ಬಿಳಿಯಾಗಬೇಕು. ಅದಕ್ಕೆ‌ ನೀರಿನಲ್ಲಿ ಈಜುತ್ತಿರುವೆ.. ಎಂದು ಉತ್ತರಿಸಿತು. ಆಗ ಹಂಸಕ್ಕೆ ಎಲ್ಲಿಲ್ಲದ ನಗು ಬಂದು ಗಹಗಹಿಸಿ ನಕ್ಕಿತು‌. "ಅಯ್ಯೋ.. ಹುಚ್ಚಿ. ನಮ್ಮ ಬಣ್ಣ ನೀರಿನಲ್ಲಿ ಬದಲಾಗುವುದೇ..ನೀನೆಲ್ಲಿಯ ಮೂರ್ಖಿ. ಕತ್ತಲಾಗುತ್ತಾ ಬಂತು‌. ಬೇಗ ಮನೆ ಸೇರು ಎಂದಿತು. ಕಾಗೆಗೆ ಬೇಸರವಾಗಿ ಅಲ್ಲಿಂದ ಹಾರಿಹೋಯಿತು.
ಮನೆ ಕಡೆಗೆ ತಲುಪ ಬೇಕೆನ್ನುವಷ್ಟರಲ್ಲಿ  ಅಲ್ಲೊಬ್ಬ ಪುಟ್ಟ ಹುಡುಗ ತಾನು ತಿನ್ನುತ್ತಿದ್ದ ಆಹಾರವನ್ನು ಕೋಳಿಗಳಿಗೆ ಎಸೆದು ಮನೆಯೊಳಗೆ ಓಡಿದ. ಆಗ ಒಂದೆರಡು ಕೋಳಿಗಳು "ಅದು ನನಗೆ ಬೇಕು.. ನನ್ನ ಆಹಾರ.. ಕೊಡು.." ಎಂದು ಜಗಳ ಮಾಡಿಕೊಳ್ಳಲು ಆರಂಭಿಸಿದವು‌. ನಾಯಿಗಳು ಓಡೋಡಿ ಬಂದು "ಗುರ್...ಗುರ್.." ಎಂದು ಹೆದರಿಸಿ ಕೋಳಿಗಳ ಓಡಿಸಿಬಿಟ್ಟು ತಾವು ತಿನ್ನಲು ಶುರುಮಾಡಿದವು. ಬೆಕ್ಕೊಂದು ಅಲ್ಲೇ ಮೂಲೆಯಿಂದ "ಮಿಯಾವ್.. ಮಿಯಾವ್..  ಎಂದು ಮೆಲು ದನಿಯಲ್ಲೇ ನನಗೂ ಕೊಡು.." ಎಂದು ಹೇಳುತ್ತಿತ್ತು.
ಇದನ್ನೆಲ್ಲ ದೂರದಿಂದಲೇ ನೋಡಿದ ಕಾಗೆಯೇ ಇನ್ನೊಂದು ಅಚ್ಚರಿ ವಿಷಯ ಕಣ್ಣಿಗೆ ಬಿತ್ತು. ಅದೇನೆಂದರೆ " ತನ್ನ ಬಳಗದ ಕಾಗೆಯೊಂದು ಆಹಾರ ಸಿಕ್ಕಿದೆ ಬೇಗ ಬನ್ನಿ ಎಲ್ಲ, ಇಲ್ಲದಿದ್ದರೆ ಈ ನಾಯಿಗಳು ಖಾಲಿ ಮಾಡಿಯಾವು... ಕಾವ್..ಕಾವ್.." ಎಂದು ಎಲ್ಲರನ್ನೂ ಕೂಗಿ‌ ಕರೆಯುತ್ತಲಿತ್ತು.
ಆಗ ಕಾಗೆಗೆ ಉಳಿದ ಸ್ನೇಹಿತರು ಹೇಳಿದ ಮಾತು ನೆನಪಿಗೆ ಬಂದಿತು. " ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು..  ಎಂದು. ಕಾಗೆಗಳ ವಿಶೇಷ ಗುಣವೇ ಆಹಾರ ನೋಡಿದಾಗ ತನ್ನ ಬಳಗದವರನ್ನೆಲ್ಲ ಕೂಗಿ ಕರೆದು ಜೊತೆಗೂಡಿ ಸೇವಿಸುವುದು.
ನೋಡಿದಿರಾ ಮಕ್ಕಳೇ.‌ ಎಲ್ಲರಿಗೂ ಅವರದೇ ಆದ ವಿಶೇಷತೆ ಇರುತ್ತದೆ. ಅವರಿವರನ್ನು ನೋಡಿ ಬೇಸರಮಾಡಿಕೊಳ್ಳಬಾರದು.
.
.
ಕಥೆಗಾರ್ತಿ: ಸಿಂಧು ಭಾರ್ಗವ್. ಬೆಂಗಳೂರು-೨೧

ಮಕ್ಕಳ ನೀತ ಕಥೆ ಅರಸಿ ಬಂದ ಅದೃಷ್ಟ


ಮಕ್ಕಳ ಕಥೆ: ೦೪ ಅರಸಿ ಬಂದ ಅದೃಷ್ಟ


ಚಂದಾಪುರ ಎನ್ನುವ ಹಳ್ಳಿಯಲ್ಲಿ ರಾಮ-ಭೀಮ ಎಂಬ ಇಬ್ಬರು ಅಣ್ಣತಮ್ಮರಿದ್ದರು. ಅವರಿಗೆ ಮೂರ್ತಿಗಳನ್ನು ತಯಾರಿಸುವ ಕಲೆ ರಕ್ತಗತವಾಗಿತ್ತು. ಹಾಗಾಗಿ ಪ್ರತಿದಿನ ಕಷ್ಟಪಟ್ಟು ವಿವಿಧ ಮೂರ್ತಿಗಳ ತಯಾರಿಸಿ ಮಾರಲು ಇಡುತ್ತಿದ್ದರು. ಆದರೆ ಅವರ ಹಳ್ಳಿಯಲ್ಲಿ ಯಾರೂ ಕೊಳ್ಳುವವರೇ ಇರಲಿಲ್ಲ. ಕಾರಣ ಹಳ್ಳಿಗರಿಗೆ ಅದರ ಅವಶ್ಯಕತೆಯೇ ಇರಲಿಲ್ಲ. ಹಾಗಾಗಿ ತುಂಬಾ ಕಷ್ಟದಲ್ಲಿ ಜೀವನ ನಡೆಯುತಲಿತ್ತು. ಇದನ್ನು ಗಮನಿಸಿದ ಅವರ ಗೆಳೆಯ ಒಂದು ಉಪಾಯ ಮಾಡಿದ. ನಿಮ್ಮ ಮೂರ್ತಿಗಳು ಮಾರಾಟವಾಗಲು ನಾನು ಹೇಳಿದ ಹಾಗೆಯೇ ಮಾಡಿರಿ ಎಂದು ಸಲಹೆ ನೀಡಿದ. ಅದರಂತೆ ಅಣ್ಣ ರಾಮು ಪ್ರತಿದಿನ ಬೆಳಿಗ್ಗೆ ಒಂದಷ್ಟು ಮೂರ್ತಿಗಳನ್ನು ಗೋಣಿಚೀಲದಲ್ಲಿ ತುಂಬಿಸಿಕೊಂಡು ಪಟ್ಟಣದ ಕಡೆಗೆ ಹೋಗುವ ಮಾರ್ಗದಲ್ಲಿ ಇರಿಸಿ ಮಾರಾಟ ಮಾಡಲು ಕುಳಿತುಕೊಳ್ಳುತ್ತಿದ್ದ. ಅಲ್ಲಿ ಇರುವ ವಿಶಾಲವಾದ ಮರದ ಕೆಳಗೆ ಎಲ್ಲಾ ಮೂರ್ತಿಗಳ ಸುಂದರವಾಗಿ ಜೋಡಿಸಿಟ್ಟು ಗಿರಾಕಿಗಳಿಗಾಗಿ ಕಾಯುತ್ತಿದ್ದ. ಒಮ್ಮೆ ವಿದೇಶಿಗರು ಸಂಸಾರ ಸಮೇತ ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಇವನ ಮೂರ್ತಿಗಳ ಕೆತ್ತನೆಯ ಮೇಲೆ ದೃಷ್ಟಿ ಹಾಯಿಸಿದರು. ಅವರಿಗೂ  ಖುಷಿಯಾಗಿ ಕಾರು ನಿಲ್ಲಿಸಿ ಖರೀದಿಸಲು ಹೊರಟರು. ಆಗ ರಾಮುವು ಮನದೊಳಗೆ ಖುಷಿ ಪಟ್ಟು "ವಿದೇಶಿಗರು ನನ್ನ ಕಡೆಗೆ ಬರುತ್ತಾ ಇದ್ದಾರೆ. ಈದಿನ ಚೆನ್ನಾಗಿದೆ. ನಮ್ಮ ಮೂರ್ತಿಗಳಿಗೆ ಒಳ್ಳೆ ಬೆಲೆ ಸಿಕ್ಕಿ ಮಾರಾಟವಾಗಲಪ್ಪ.." ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದನು. ಹಾಗೆಯೇ ವಿದೇಶಿಗರು ಬಂದು ಧ್ಯಾನಸ್ಥ ಬುದ್ಧನ ಮೂರ್ತಿಯನ್ನು ಕೇಳಿದರು. ಅವನು ಅದರ ಬೆಲೆ ಒಂದು ನೂರು ರೂಪಾಯಿ ಎಂದನು‌. ಆಗ ವಿದೇಶಿಗರಿಗೆ ಅಚ್ಚರಿಯಾಯಿತು. "ಇಷ್ಟು ಕಡಿಮೆ ಬೆಲೆಯಲ್ಲಿ ಮಾರುತ್ತಿರುವೆಯಾ? ನಿನಗೆ ನಿನ್ನ ಮೂರ್ತಿಗಳ ಮೌಲ್ಯ ತಿಳಿದಿಲ್ಲ. ನಾವಿದನ್ನು ವಿದೇಶಕ್ಕೆ ಕೊಂಡೊಯ್ದರೆ  ಲಕ್ಷ ಲಕ್ಷ ರೂಪಾಯಿ ಮೌಲ್ಯವಿದೆ, ತಿಳಿದಿರುವೆಯಾ? ಎಂದು ಕೇಳಿದರು.
ಆಗ ರಾಮುವಿಗೆ " ಹೌದೇ, ನಿಜಕ್ಕೂ ಈ ವಿಷಯ ನನಗೆ ತಿಳಿದಿಲ್ಲ ಬುದ್ಧಿ. ನಾವು ಹಳ್ಳಿಗರು. ನೀವೇ ಒಂದಷ್ಟು ಹಣ ಕೊಟ್ಟು ಮೂರ್ತಿ ತೆಗೆದುಕೊಂಡು ಹೋಗಿ ಎಂದನು. ಆಗ ಸಾವಿರ ರೂಪಾಯಿ ನೀಡಿ ಮೂರ್ತಿಯ ಖರೀದಿಸಿದರು. ಹಾಗೆಯೇ ವಾಪಾಸ್ಸಾಗುವಾಗ ಕಿವಿಮಾತನ್ನು ಹೇಳಿದರು. "ನಿಮ್ಮ ಪಕ್ಕದ ಊರಿನ ಜಾತ್ರೆ ನೋಡಲು ನಮ್ಮಂತೆ ನೂರಾರು ವಿದೇಶಿಗರು ಬರುವವರಿದ್ದಾರೆ. ಎಲ್ಲರೂ ಇದೇ  ಮಾರ್ಗದಲ್ಲಿ ಸಾಗಬೇಕು. ಇನ್ನಷ್ಟು  ಆಕರ್ಷಕ ಮೂರ್ತಿಗಳನ್ನು ತಯಾರಿಸಿ ಮಾರಲು ಕುಳಿತುಕೋ. ಯಾರು ಕೇಳಿದರೂ ಸಾವಿರ ರೂಪಾಯಿ ಎಂದೇ ಹೇಳು", ಎಂದು ಹೇಳಿ ಹೊರಟುಹೋದರು. ರಾಮುವಿಗೆ ಎಲ್ಲಿಲ್ಲದ ಸಂತಸವಾಯಿತು.
ಸಂಜೆಯಾದ ಕಾರಣ ಮೂರ್ತಿಗಳನ್ನು ಗೋಣಿ ಚೀಲದಲ್ಲಿ ತುಂಬಿಸಿಟ್ಟು ಮರದ ಹಿಂಬದಿಯಲ್ಲೇ ಮುಚ್ಚಿಟ್ಟು ಮನೆ ಕಡೆಗೆ ನಡೆದನು. ತಮ್ಮನಲ್ಲಿ ನಡೆದುದನ್ನು ಹೇಳಿ ಖುಷಿಪಟ್ಟನು. ಅಷ್ಟೊಂದು ಹಣವನ್ನು ಎಂದೂ ನೋಡದ ಅವರು ಕನಸಿನ ಲೋಕದಲ್ಲಿ ತೇಲುತ್ತಿದ್ದರು. ಹಾಗೆಯೇ ವಿದೇಶಿಗನ ಸಲಹೆಯಂತೆ ಒಂದಷ್ಟು ಹೊಸ ಬಗೆಯ ಮೂರ್ತಿಗಳನ್ನು ರಾತ್ರಿಪೂರ ನಿದಿರೆ ಬಿಟ್ಟು ತಯಾರು ಮಾಡಿದರು. ಆದರೆ ಅವನ ಮೂರ್ಖತನದ ನೆನಪೇ ಆಗಲಿಲ್ಲ. ರಾಮು ಮುಂಜಾನೆ ಉಳಿದ ಹೊಸ ಮೂರ್ತಿಗಳ ಹಿಡಿದು ಅದೇ ಮರದ ಕೆಳಗೆ ಬಂದು ನೋಡಿದರೆ ಅಲ್ಲಿ ಮೂರ್ತಿಗಳೇ ಮಾಯವಾಗಿದ್ದವು. ಕಾರಣ ಯಾರೋ ಕದ್ದೊಯ್ದಿದ್ದರು‌. ರಾಮುವಿಗೆ ಒಮ್ಮೆ ಎದೆ "ದಗ್" ಎಂದಾಯಿತು. "ಅಷ್ಟು ಬೆಲೆಬಾಳುವ ಮೂರ್ತಿಗಳ ಕಳೆದುಕೊಂಡೆವಲ್ಲ, ಏನು ಮಾಡುವುದೀಗ? ಯಾರು ಕದ್ದರು? ನಮ್ಮ ಮೂರ್ತಿಗಳೆಲ್ಲ ಎಲ್ಲಿ ಹೋಯಿತು? ಅಯ್ಯೋ!!" ಎಂದು ಗೋಳಾಡಿದನು. ಚಿಂತಾಕ್ರಾಂತನಾಗಿ ತಲೆಗೆ ಕೈಹೊತ್ತು ಕುಳಿತುಕೊಂಡನು. ನಾನೆಂತ ಮೂರ್ಖ‌ ತಪ್ಪುಮಾಡಿಬಿಟ್ಟೆನಲ್ಲ ಎಂದು ರೋಧಿಸಿದನು. ವ್ಯಾಪಾರ ಮಾಡಲು ಯಾವ ಆಸಕ್ತಿಯೂ ಇರಲಿಲ್ಲ. ಆದರೆ ಆ ದಿನವೂ ಒಬ್ಬ ವಿದೇಶಿಗರು ಬಂದು ಸಾವಿರ ರೂಪಾಯಿ ನೀಡಿ ಮೂರ್ತಿ ಖರೀದಿಸಿದ್ದರು‌. ಈ ದಿನ ಮತ್ತೆ ತಪ್ಪು ಮಾಡಲು ಹೋಗಲಿಲ್ಲ. ಸಂಜೆಯ ಮೇಲೆ ಉಳಿದ ಮೂರ್ತಿಗಳ ಚೀಲದಲ್ಲಿ ತುಂಬಿಸಿಕೊಂಡು ಮನೆಗೆ ವಾಪಾಸ್ಸಾದನು. ತಮ್ಮನಿಗೆ ನಡೆದ ಘಟನೆಯನ್ನು ವಿವರಿಸಿದನು. ಅವನೂ ಕೂಡ ಅಣ್ಣನಿಗೆ ಸಮಾಧಾನ ಮಾಡಿ ಆ ರಾತ್ರಿಯೂ  ನಿದಿರೆ ಮಾಡದೇ ಒಂದಷ್ಟು ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡರು.ಹೀಗೆ ಕಷ್ಟಪಟ್ಟು ಹಗಲು ರಾತ್ರಿಯೆನ್ನದೇ ಅನೇಕ ಮೂರ್ತಿಗಳ ತಯಾರಿಸಿದರು. ಅಣ್ಣನು ಮಾರಾಟಮಾಡಲು ಹೋಗುತ್ತಿದ್ದ. ತಮ್ಮನು ಮೂರ್ತಿಗಳ ತಯಾರಿಸುತ್ತಿದ್ದ‌ನು. ಜಾತ್ರೆಯಿದ್ದ ಕಾರಣ ಬಂದ ವಿದೇಶಿಗರು ಖರೀದಿಸಿದರು. ಜಾತ್ರೆಗೂ ಒಂದಷ್ಟು ಮೂರ್ತಿಗಳ ಕೊಂಡೊಯ್ದು ಮಾರಲು ಆರಂಭಿಸಿದರು. ಹೀಗೆ ಒಂದು ತಿಂಗಳಲ್ಲಿ ಶ್ರೀಮಂತರಾದರು. ಅವರ ಕಷ್ಟಗಳೆಲ್ಲ ಕಳೆಯಿತು‌.
.
.
ಕಥೆಗಾರ್ತಿ : ಸಿಂಧು ಭಾರ್ಗವ್. ಬೆಂಗಳೂರು

ಮಕ್ಕಳ ನೀತಿ ಕಥೆ ಸ್ವಾರ್ಥಿಯಾಗದಿರಿ


ಮಕ್ಕಳ ಕಥೆ ೦೩:  ಸ್ವಾರ್ಥಿಯಾಗದಿರಿ


ಕಾನನದ ಮಧ್ಯದಲ್ಲಿ ಒಂದು ವಿಶಾಲವಾದ ಮರವಿತ್ತು. ಅದು‌ ಮುಗಿಲಿನಷ್ಟು ಎತ್ತರ ಹಾಗೆಯೇ ತನ್ನ ಅಗಲವಾದ ರೆಂಬೆಗಳನ್ನು ಚಾಚಿ ಎಲ್ಲಾ ಕಡೆ ಹರಡಿಕೊಂಡು ಬೆಳೆದಿತ್ತು. ಅದರಲ್ಲಿ ಒಂದಷ್ಟು ಗಿಡುಗನ ಗೂಡುಗಳು ಹಾಗೂ ಕಾಗೆಯ ಗೂಡುಗಳಿದ್ದವು.  ಎಲ್ಲವೂ ತಮ್ತಮ್ಮ ಗೂಡಿನಲ್ಲಿ ಮರಿಗಳ ಜೊತೆಗೆ ವಾಸವಾಗಿದ್ದವು. "ಚೀವ್ ಚೀವ್..." ಎಂಬ ಚಿಲಿಪಿಲಿಯು ಯಾವಾಗಲೂ  ಕೇಳಿ ಬರುತ್ತಿತ್ತು. ಗಿಡುಗನು ತನ್ನ ಗೂಡಿನ ಮೇಲೆಯೇ ಗಸ್ತು ಹೊಡೆಯುತ್ತಾ ಇರುತ್ತಿತ್ತು. ದೂರ-ದೂರಕೆ ಹಾರಿ ಹೋಗಿ ಗಂಡು ಗಿಡುಗವು ಆಹಾರ ತರುವ ತನಕ ಹೆಣ್ಣು ಗಿಡುಗವು ಮರಿಗಳನ್ನು ಕಾಯುವುದು ಅದರ ಜವಾಬ್ದಾರಿ ಆಗಿತ್ತು. ಒಮ್ಮೆ ಇದನ್ನೆಲ್ಲ ದೂರದಿಂದ ಗಮನಿಸುತ್ತಿದ್ದ ಕಾಗೆಗೆ, "ಆ ಗೂಡಿನಲ್ಲೇನಿರಬಹುದು. ಈ ಗಿಡುಗ ಏಕೆ ಗಸ್ತು ಹೊಡೆಯುತ್ತಿದೆ.."ಎಂಬ ಪ್ರಶ್ನೆ ಮೂಡಿತು‌. ಒಮ್ಮೆ ಹೋಗಿ ನೋಡಲೇಬೇಕು ಎಂಬ ಕುತೂಹಲ ಹೆಚ್ಚಿತು. ಆದರೆ ಆ ಹೆಣ್ಣು ಗಿಡುಗವೂ ಎಲ್ಲಿಗೂ ಕದಲುತ್ತ ಇರಲಿಲ್ಲ‌. ಅದರಿಂದ ಕಾಗೆಯೆ ಅತ್ತ ಕಡೆ ಹೋಗಲು ಭಯವಾಗುತ್ತಿತ್ತು.
ಒಮ್ಮೆ ಆ ಸಮಯ ಬಂದೇ ಬಿಟ್ಟಿತು. ಹೆಣ್ಣು ಗಿಡುಗ ಆಕಾಶದೆತ್ತರಕ್ಕೆ ಹಾರಿ ಮೋಡದ ಮರೆಯಲಿ ಮಾಯವಾಯಿತು. ಆಗ ಕಾಗೆಗೆ ತನ್ನ ಕೆಲಸಕ್ಕೆ ಇದೇ ಸರಿಯಾದ ಸಮಯ ಎಂದು ಮನದಲ್ಲೇ ಬಗೆದು ಗಿಡುಗನ ಗೂಡಿನ ಬಳಿ ಹಾರಿ ಬಂದಿತು. ಅಲ್ಲಿ ನೋಡಿದರೆ ಪರಮಾಶ್ಚರ್ಯ. "  ಹದ್ದಿಗೆ ಪುಟ್ಟಪುಟ್ಟ ಮೂರು ಮರಿಗಳಿದ್ದವು. ಎಳೆಮರಿಗಳ ನೋಡಿ ಕಾಗೆಯ ಬಾಯಲ್ಲಿ ನೀರು ಬಂದಿತು. ಹೇಗಾದರೂ ಮಾಡಿ ಇದನ್ನು ಹೊತ್ತೊಯ್ದು ತನ್ನ ಮರಿಗಳಿಗೆ ಆಹಾರವಾಗಿ ಕೊಡಬೇಕು ಎಂಬ ಕೆಟ್ಟ ಆಲೋಚನೆ ಮಾಡಿತು. ಹಾಗೆಯೇ ಒಂದನ್ನು ಅಲ್ಲಿಯೇ ತಿಂದು, ಒಂದನ್ನು ತನ್ನ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಸಾಯಿಸಿತು. ಹಾಗೆಯೇ ಸತ್ತ ಗಿಡುಗನ ಮರಿಯನ್ನು ಕಾಲಿನಲ್ಲಿ ಬಿಗಿಹಿಡಿತು ತನ್ನ ಗೂಡಿನತ್ತ ಹಾರಿಹೋಯಿತು.
ಅಲ್ಲಿ ನೋಡಿದರೆ ಏನ್ ಆಶ್ಚರ್ಯ. ಗಾಬರಿ ಹುಟ್ಟಿಸುವ ಘಟನೆ ನಡೆದಿತ್ತು. ತನ್ನ ಮರಿಗಳ ಪುಕ್ಕಗಳೆಲ್ಲ ಚೆಲ್ಲಪಿಲ್ಲಿಯಾಗಿ ಬಿದ್ದಿದ್ದವು. ಮರಿಗಳು ಕಾಣಿಸುತ್ತಿಲ್ಲ. "ಅಯ್ಯೋ... ನನ್ನ ಮರಿಗಳೆಲ್ಲಿ ??" ಎಂದು ಗೋಳಾಡಿತು. "ನಾನು ಅವುಗಳಿಗೆ ತಂದ ಈ ಹಸಿ ಮಾಂಸವನ್ನು ಏನು ಮಾಡಲಿ. ಇದನ್ನು ತಿನ್ನಲು ಈಗ ನನ್ನ ಮರಿಗಳೇ ಇಲ್ಲವಲ್ಲ .." ಎಂದು ರೋಧಿಸಿತು. ಆಗ ಮರದಿಂದ ಸರಕ್ಕನೇ ಸರಿದು ಹೋಗುತ್ತಿರುವ ಸರ್ಪವೊಂದು ಕಾಣಿಸಿತು. ಏನೆಂದು ಕಾಗೆ ಅದರ ಕಡೆಗೆ ಧಾವಿಸಿ ನೋಡಿದರೆ ತನ್ನ ಮರಿಯ ಹಸಿಮಾಂಸವನ್ನು ಬಾಯಲ್ಲಿ ಕಚ್ಚಿಕೊಂಡಿತ್ತು. ಸರಸರನೆ ಸರಿದು ಮಾಯವಾಯಿತು. ಆದರೆ ಆಗಸದಲ್ಲಿ ಗಿಡುಗ ಗಸ್ತು ಹೊಡೆಯುತ್ತಲೇ ಇದೆ. ಅಲ್ಲದೇ ಉಳಿದ ಒಂದು ಮರಿಯು ಗಾಬರಿಯಿಂದ ಕಿರುಚುತ್ತ ತಾಯಿ ಗಿಡುಗ ಬರುವುದನ್ನೇ ಕಾಯುತಲಿತ್ತು.
.
.
ನೀತಿ: ನಾವು ಕೇಡು ಬಯಸಿದರೆ ನಮಗೂ ಕೇಡು ಸಂಭವಿಸುತ್ತದೆ. ಕಾಗೆಯು ಹೇಗೆ ಗಿಡುಗನ ಮರಿಗಳನ್ನು ಸಾಯಿಸಿತೋ ಹಾಗೆಯೇ ಸರ್ಪವೂ ಕಾಗೆಯ ಮರಿಯನ್ನು ಸಾಯಿಸಿತ್ತು. ಹೆತ್ತ ಕರುಳಿನ ಸಂಕಟ ಎಲ್ಲದಕ್ಕೂ ಒಂದೇ ತೆರನಾಗಿರುತ್ತದೆ.
.
.
ಕಥೆಗಾರ್ತಿ: ಸಿಂಧು ಭಾರ್ಗವ್. ಬೆಂಗಳೂರು-೨೧

ಮಕ್ಕಳ ‌ನೀತಿ ಕಥೆ ಮರ ಮತ್ತು ಮಾಲಿ


ಮಕ್ಕಳ ಕಥೆ ೦೨  ಮರ ಮತ್ತು ಮಾಲಿ

ಒಮ್ಮೆ ಮಾಲಿ ಮರಕಡಿಯಲು ಕಾಡಿಗೆ ಹೋಗಿದ್ದನು. ಆಗ ಒಂದು ಕರಡಿ ಎದುರಿಗೆ ಬಂದು‌ ಮರ ಕಡಿಯಲು ಅಡ್ಡವಾಗಿ ನಿಂತಿತು. "ಏಕೆ ಕರಡಿಯಣ್ಣ, ಏಕೆ ಮರ ಕಡಿಯಲು ಬಿಡುತ್ತಿಲ್ಲ. ಏಳು ಇಲ್ಲಿಂದ.." ಎಂದು ಮಾಲಿ ಹೇಳಿದನು.
ಆಗ ಕರಡಿಯು "ಬೇಡ ಮಾಲಿ, ಮರವನ್ನು ಕಡಿಯದಿರು. ಇದರಲ್ಲಿ ತುಂಬಾ ಹಲಸಿನ ಹಣ್ಣು ಸಿಗುತ್ತದೆ. ಹಾಗೆಯೇ ಜೇನುಗೂಡುಗಳಿವೆ. ನೀನು ಮರ ಕಡಿದರೆ ನನ್ನಂತಹ ಅದೆಷ್ಟೋ ಕರಡಿಗಳಿಗೆ ಆಹಾರ ತಪ್ಪಿಹೋಗುತ್ತದೆ. ಜೇನುಹುಳಗಳಿಗೂ ಬದುಕಲು ತೊಂದರೆಯಾಗುತ್ತದೆ ಎಂದಿತು. ಪಾಪ.. ಎನಿಸಿ ಮಾಲಿ ಮರ ಕಡಿಯುವುದನ್ನು ಬಿಟ್ಟು ಮುಂದಕ್ಕೆ ಹೋದನು‌‌. ಒಂದಷ್ಟು ದೂರ ಹೋದ ಮೇಲೆ ಮತ್ತೊಂದು ಹಳೆಯ ಮರವನ್ನು ನೋಡಿ ಕಡಿಯಲು ಮುಂದಾದನು. ಆಗ ಒಂದಷ್ಟು ಹಕ್ಕಿಗಳ ಹಿಂಡು "ಸರಕ್ಕನೆ" ಅವನ ಹಣೆಗೆ ಚುಚ್ಚಿ ಹಾರಿಹೋದವು. ಕೆಲವು ಕಿರುಚಲು ಶುರುಮಾಡಿದವು. ಆಗ ಮುದಿಹಕ್ಕಿಯೊಂದು ಬಂದು "ಬೇಡ ಮಾಲಿ ಮರವನ್ನು ಕಡಿಯಬೇಡ. ನೀನು ಮರ ಕಡಿದರೆ ನಮ್ಮಂತಹ ಅದೆಷ್ಟೋ ಪಕ್ಷಿಗಳಿಗೆ ವಾಸಿಸಲು ಮನೆಯೇ ಇರದಂತಾಗುತ್ತದೆ. ಹಾಗೆಯೇ ಸೊಪ್ಪುಗಳನ್ನು ತಿನ್ನಲು ಬರುವ ಪ್ರಾಣಿಗಳಿಗೂ ಉಪವಾಸವಿರಬೇಕಾಗುತ್ತದೆ. ನೆರಳು ಬಯಸಿ ಬರುವ ಜನರೂ ನೆರಳಿಲ್ಲದೇ ವಾಪಾಸ್ಸಾಗುವರು, ಮಳೆ -ಬೆಳೆ ಎಲ್ಲವೂ ಕ್ಷೀಣಿಸುತ್ತದೆ." ಎಂದನು. ಆ ಮುದಿಪಕ್ಕಿಯ ಮಾತು ಕೇಳಿ ಮಾಲಿಗೆ ಹೌದೆನಿಸಿ ಮನೆಗೆ ವಾಪಸ್ಸಾದನು.
ಮನೆ ತಲುಪುವಾಗಲೇ ರಾತ್ರಿಯಾದ ಕಾರಣ, ಊಟ ಮಾಡಿ ನಿದಿರೆಗೆ ಜಾರಿದನು. ಆಗ ಒಂದು ಸದ್ದು ಕೇಳಿಸತೊಡಗಿತು. ಕರ್ರ್...ರ್ರ್...ರ್ರ್... ಎಂಬ ಶಬ್ದವು ಮನೆಹೊರಗಿನಿಂದ ಜೋರಾಗಿ ಕೇಳಿಸುತ್ತಲಿತ್ತು. ಆಗ ಹೊರಗೆ ಹೋಗಿ ನೋಡಿದರೆ ಯಾರೂ ಇರಲಿಲ್ಲ‌. ಮತ್ತೆ ಮಲಗಲು ಹೋದನು. ಮತ್ತದೇ ಶಬ್ದ ಕೇಳಿ ಬಂದಾಗ ಮನೆಯ ಹಿತ್ತಲಿನ ಕಡೆಗೆ ಹೋದನು. ಆಗ ಹಿತ್ತಲಿನಲ್ಲೊಬ್ಬ ತನ್ನ ಮನೆಯದೇ ಮರವನ್ನು ಕಡಿಯುತ್ತಾ ಇದ್ದನು. ಅದನ್ನು ನೋಡಿ ಅಚ್ಚರಿಯಾಯಿತು. ಕೋಪಬಂದು ಅವನನ್ನು ಚೆನ್ನಾಗಿ ಹೊಡೆದು ಮರಕ್ಕೆ ಕಟ್ಟಿ ಹಾಕಿದನು. ನಂತರ ಹೇಳು "ಯಾರು ಮರ ಕಡಿಯಲು ಹೇಳಿದ್ದು... ಹ್ಮ.ಬೇಗ ಹೇಳು" ಎಂದು ದಬಾಯಿಸಿದನು. ಆಗ ಮರಕಡಿಯುವವ ಹೆದರಿಕೆಯಿಂದ "ನಾನಲ್ಲ ಬುದ್ಧಿ.. ನಂದೇನು ತಪ್ಪಿಲ್ಲ. ನಿಮ್ಮ ಹೆಂಡತಿಯೇ ಮರಕಡಿಯಲು ಹೇಳಿದ್ದು, ನನ್ನ ಬಿಟ್ಟುಬಿಡಿ ಎಂದು ಗೋಗರೆದನು.
ಮಾಲಿಗೆ ಎಲ್ಲಿಲ್ಲದ ಕೋಪ ಬಂದಿತು. ಹೆಂಡತಿಯ ಕರೆದು ಚೆನ್ನಾಗಿ ಬೈದನು. " ನನ್ನನ್ನು ಕೇಳದೇ ಮರವನ್ನು ಏಕೆ ಕಡಿಯಲು ಹೇಳಿದೆ. ನನ್ನ ತಂದೆಯವರು ನೆಟದಟ ಗಿಡವಿದು‌ ಈಗ ಹೆಮ್ಮರವಾಗಿ ಬೆಳೆದಿದೆ‌. ಈ ಮರದಿಂದ ಎಷ್ಟೆಲ್ಲ ಉಪಯೋಗ ಪಡೆದಿದ್ದೀ ನೀನು. ಈಗೇನು ಸಮಸ್ಯೆ ಎದುರಾಯಿತು‌ ಏಕೆ ಮರ ಕಡಿಯಲು ಹೇಳಿದೆ? ಅದು ನಿನಗೇನು ಮಾಡಿತ್ತು? ಎಂದು ಹೊಡೆಯಲು ಮುಂದಾದನು.
ಆಗ ಹೆಂಡತಿಯು ಹೆದರುತ್ತಾ "ತಪ್ಪಾಯ್ತು ಕ್ಷಮಿಸಿಬಿಡಿ.. ಹಣದ ಆಸೆಗೆ ಮರ ಕಡಿಯಲು ಹೇಳಿದೆ. ನಿಮಗೆ ಗೊತ್ತಾಗ ಬಾರದೆಂದು ರಾತ್ರಿ ಬರಲು ಹೇಳಿದೆ. ಇನ್ನೆಂದೂ ಈ ತಪ್ಪನ್ನು ಮಾಡಲಾರೆ " ಎಂದು ಕೈಮುಗಿದು ಬೇಡಿಕೊಂಡಳು.
ಮರದಿಂದ ನೆರಳು, ಹಣ್ಣು ಹೂವು, ಪಕ್ಷಿಗಳಿಗೆ ಇರಲು ವಾಸಸ್ಥಾನ, ಕಟ್ಟಿಗೆ ಗೊಬ್ಬರಕ್ಕೆ ಸೊಪ್ಪು ಹೀಗೆ ಎಷ್ಟೆಲ್ಲ ಉಪಯೋಗವಿದೆ. ಹಾಗಾಗಿ,ಮಕ್ಕಳೇ ಮರವನ್ನು ಕಡಿಯಲು ಬಿಡಬೇಡಿ. ಗಿಡವನ್ನು ನೆಡಿ.
.
.
ಕಥೆಗಾರ್ತಿ : ಸಿಂಧು ಭಾರ್ಗವ್. ಬೆಂಗಳೂರು-೨೧

ಮಕ್ಕಳ ನೀತಿ ಕಥೆಗಳು ಮನಃ ಪರಿವರ್ತನೆ

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು :
ಮಕ್ಕಳ ಸಾಹಿತ್ಯವನ್ನು ಬೆಳೆಸುವ ಜವಾಬ್ದಾರಿ ನಮ್ಮಲ್ಲರದ್ದು.


ಮಕ್ಕಳ ಕಥೆ:೦೧
ಮನಃ ಪರಿವರ್ತನೆ (ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬಾಳಿರಿ)

ಒಬ್ಬ ರಾಜ ತನ್ನ ರಾಜ್ಯವನ್ನು ನೋಡಲು ಕುದುರೆಯನೇರಿ ಹೊರಟನು. ಅವನ ರಾಜ್ಯದ ಜನರ ಸ್ಥಿತಿಗತಿಯನ್ನು ಪರೀಕ್ಷಿಸಿ ಕಷ್ಟನೋವುಗಳನ್ನು ಕೇಳಿ ಅವರಿಗೆ ಸಮಾಧಾನ ಮಾಡಿ, ಕೈಲಾದ ಸಹಾಯ ಮಾಡಲು ಹೊರಟಿದ್ದನಂತೆ. ಹೀಗೆ ಒಂದು ಊರಿನ ಹಾದಿಯಲ್ಲಿ ಹೋಗುವಾಗ ತುಂಬಾ ಹಸಿವಾಯಿತಂತೆ. ತಿನ್ನಲು ಏನೂ  ಕೊಂಡೊಯ್ದಿರದ ಕಾರಣ ಸುತ್ತಮುತ್ತ ನೋಡಿದ. ಆಗ ಒಂದು ಬ್ರಹದಾಕಾರದ ಮರದಲ್ಲಿ ತುಂಬಾ ಹಣ್ಣುಗಳು ಜೋತುಬಿದ್ದಿದ್ದವು. ಅದನ್ನು ಕಂಡು ಬಾಯಿಯಲ್ಲಿ ನೀರು ಬಂದಿತು. ಆದರೆ ಆ ಮರ ಎತ್ತರವಿದ್ದ ಕಾರಣ ಒಂದು ಹಣ್ಣೂ ಕೈಗೆ ಎಟಕುತ್ತ ಇರಲಿಲ್ಲ. ಹಾಗಾಗಿ ಅವನಿಗೆ ಬೇಸರವಾಯಿತು‌. ಆಗ ಅಲ್ಲೇ ಇದ್ದ ಒಬ್ಬ ಮರ ಕಡಿಯುವವನಲ್ಲಿ ಆ ಹಣ್ಣುಗಳನ್ನು ಕೊಯ್ದುಕೊಡಲು ಹೇಳಿದನು. ಅವನು "ಓ ನಮ್ಮ ಮಹರಾಜರು. ನಿಮಗೆ ಇಲ್ಲ ಎನ್ನಲಾಗುವುದೇ?.." ಎಂದು ಸಾಕಷ್ಟು ಹಣ್ಣನ್ನು ಕೊಯ್ದು ಅವನಿಗೆ ಬುಟ್ಟಿಯಲ್ಲಿ ತುಂಬಿಸಿಕೊಟ್ಟನಂತೆ. ಆಗ ಮೊದಲೇ ಹಸಿದಿದ್ದ ರಾಜನು ಆ ಹಣ್ಣುಗಳನ್ನು ನೋಡಿ ಗಬಗಬ ತಿಂದನಂತೆ. ದೀರ್ಘವಾಗಿ ಒಂದು ತೇಗು ಬರಿಸಿ "ಮೆಚ್ಚಿದೆ ನಿನ್ನ . ನೀನು ಮಾಡಿದ ಸಹಾಯಕ್ಕೆ ತಗೋ ಕೈತುಂಬಾ ಚಿನ್ನದ ನಾಣ್ಯಗಳನ್ನು ಕೊಡುವೆ .." ಎಂದು ಹೇಳಿ ಒಂದು ರೇಶಿಮೆ ಗಂಟನ್ನು ನೀಡಿದನು‌. ಕುದುರೆಯನ್ನೇರಿ ಮುಂದೆ ಹೋದನು. ಹೀಗೆ ಸಾಗುವಾಗ ಒಂದು ಆಲೋಚನೆ ಹೊಳೆಯಿತಂತೆ. "ನಾನು ರಾಜನಾದರೂ ನನಗೆ ಒಂದು ಮರ ಏರಲು ತಿಳಿದಿಲ್ಲ. ಇದು ಎಂತಹ ಅವಮಾನ.." ಎಂದು ಮನದಲ್ಲೇ ಮರುಗಿದನು.
ನಂತರ ಬಹಳಷ್ಟು ದೂರ ಸಾಗುತ್ತಲೇ ಬಿಸಿಲು ಹೆಚ್ಚಾಗಿ ಸುಸ್ತಿನ ಜೊತೆಗೆ ನಿದಿರೆ ಬರಲು ಶುರುವಾಯಿತು. ಸುತ್ತಮುತ್ತ ನೋಡಿದರೆ ಎಲ್ಲೂ ಮಲಗಲು ಜಾಗವಿಲ್ಲ . ಅವನಿಗೆ ಏನು ಮಾಡುವುದು ಎಂದು ತಿಳಿಯದೇ ಕುದುರೆಯಿಂದ ಕೆಳಗಿಳಿದು  ಅಲ್ಲೇ ಮರದ ಕೆಳಗೆ ಕುಳಿತನು‌ . ಹಾಗೆ ಮಲಗಿದನು. ಆದರೆ ಎಷ್ಟು ಸಮಯವಾದರೂ ನಿದಿರೆ ಬರುತ್ತಿರಲಿಲ್ಲ. ಆಗ ದೂರದಲ್ಲಿ ಒಬ್ಬ ಮರಗೆಲಸದವನು ತನ್ನ ತಲೆಗೆ ಕಟ್ಟಿದ್ದ ತುಂಡು ಬಟ್ಟೆಯನ್ನು ಹಾಸಿ ಗಾಢ ನಿದಿರೆಗೆ ಜಾರಿದ್ದ. ಅವನ ಗೊರಕೆಯ ಸದ್ದು ರಾಜನವರೆಗೂ ಕೇಳಿಸುತಲಿತ್ತು‌ . ರಾಜನಿಗೆ ಮತ್ತೆ ಯೋಚನೆ ಹತ್ತಿತು‌. "ಅವನಿಗೆ ಆ ಭಗವಂತ ಅದೆಷ್ಟು ಸುಖನಿದ್ರೆ ಕರುಣಿಸಿದ್ದಾನೆ. ಏನೂ ಇಲ್ಲದೆ, ಕಲ್ಲು ಮಣ್ಣು ತರಗೆಲೆಯ ಮೇಲೆಯೇ ಗಾಢನಿದಿರೆ ಮಾಡುತ್ತಿರುವನಲ್ಲ.. ನನಗೇಕೆ ನಿದಿರೆ ಬರುತ್ತಿಲ್ಲ.." ಎಂದು. ಮತ್ತೆ ಅವನ ಕರೆದು ಕೇಳಿದನಂತೆ "ನಿನಗೆ ಹೇಗೆ ಇಷ್ಟು ನಿದಿರೆ ಬರುತ್ತದೆ. ಈ ಮಣ್ಣು ಧೂಳಿನಲ್ಲಿ ನನಗೆ ಕೂರಲು ಮನಸ್ಸಾಗುತ್ತಿಲ್ಲ.." ಎಂದು. ಆಗ ಮರಗೆಲಸದವನು ಒಮ್ಮೆ ರಾಜನನ್ನು ನೋಡಿ ಖುಷಿಯಾಗಿ ಮತ್ತೆ ಬೆಸ್ತುಬಿದ್ದು ಸಾವರಿಸಿಕೊಂಡು  ಹೇಳಿದನಂತೆ " ಬುದ್ಧೀ ನೀವು. ನೀವೇಕೆ ಇಲ್ಲಿ ಬಂದಿರಿ‌ ನಮ್ಮ ಬದುಕೇ ಹೀಗೆ. ಕಷ್ಟಪಟ್ಟು ದುಡಿದರೆ ದೇಹಕ್ಕೆ ಆಯಾಸವಾಗುತ್ತದೆ. ಆಗ ಎಲ್ಲಿ ಮಲಗಿದರೂ ನಿದಿರೆ ಬರುತ್ತದೆ. ನಮ್ಮದು ಮರಕಡಿಯುವ ಕೆಲಸ ಸ್ವಾಮಿ. ರೆಟ್ಟೆ ಮುರಿದು ಕೆಲಸ ಮಾಡಬೇಕು. ಆಗಲೇ ಮೂರ್ಕಾಸು ಸಿಗುತ್ತದೆ. ಎಂದು.  ರಾಜನಿಗೆ ಬೇಸರವಾಯಿತು. ತಾನು ತಂದಿದ್ದ ರೇಶಿಮೆ ಗಂಟನ್ನು ಅವನ ಕೈಗಿತ್ತು ಕುದುರೆಯನ್ನೇರಿದನು. ದಾರಿ ಮಧ್ಯೆಯಲ್ಲಿ ಮತ್ತೆ ಚಿಂತೆ ಕಾಡಿತು‌.
ಹೀಗೆ ಮುಂದೆ ಹೋಗುವಾಗ ನದಿ ಕಾಣಿಸಿತು. ರಾಜನಿಗೆ ಈಜು ಬರುತ್ತಿರಲಿಲ್ಲ. ಅಲ್ಲಿ ನೋಡಿದರೆ ಚಿಕ್ಕ ಮಕ್ಕಳೆಲ್ಲ ನೀರಿನಲ್ಲಿ ಈಜುತ್ತಾ ಆಟವಾಡುತ್ತಾ ಇದ್ದರು. ಕತ್ತಲಾಗುತ್ತಾ ಬಂದಿತ್ತು. ರಾಜನಿಗೆ ನದಿ ದಾಟಿ ಅರಮನೆ ತಲುಪಲೇ ಬೇಕಾಯಿತು. ಆದರೆ ಏನು ಮಾಡುವುದು.? ಕೂಡಲೇ ಅಲ್ಲಿದ್ದ ಜನರನ್ನು ಕರೆದ‌. ಹೇಳಲು ಮುಜುಗರವಾಯಿತು. ಆದರೆ ತೋರಿಸಿಕೊಳ್ಳದೇ ಗಾಂಭೀರ್ಯದಿಂದ "ನಾನು ರಾಜ , ಆಜ್ಞೆ ಮಾಡುತ್ತಿರುವೆ. ನನ್ನನ್ನು ಮತ್ತು ಕುದುರೆಯನ್ನು ಈ ನದಿಯಿಂದ ದಾಟಿಸಿ ಆ ದಡಕ್ಕೆ ಕೊಂಡೊಯ್ಯಿರಿ..." ಎಂದು. ಜನರೆಲ್ಲರೂ ಓಡೋಡಿ ಬಂದು ರಾಜನನ್ನೂ ಹೊತ್ತು ನದಿಯಲ್ಲಿ ನಡೆದರು‌ ಕುದುರೆಯನ್ನು ಎಳೆದುಕೊಂಡು ಸಾಗಿ ದಡ ಮುಟ್ಟಿಸಿದರು. ರಾಜನಿಗೆ ಒಳಗೊಳಗೆ ದಡ ಸೇರಿದ ಖುಷಿಯಾಯಿತು. ಮತ್ತೆ ತಂದಿದ್ದ ರೇಶಿಮೆ ಗಂಟನ್ನು ಅವರ ಕೈಗಿಟ್ಟು ಈ ಚಿನ್ನದ ನಾಣ್ಯಗಳನ್ನು ಎಲ್ಲರೂ ಹಂಚಿಕೊಳ್ಳಲು ತಿಳಿಸಿದನು. ಕುದುರೆಯನ್ನೇರಿ ಅರಮನೆ ಕಡೆಗೆ ಸಾಗಿದನು. ಆದರೆ ಏನೇನೋ ಪ್ರಶ್ನೆಗಳು, ಚಿಂತೆಗಳು ಕಾಡಿದವು. ಹಾಗೆ ತಲೆತಗ್ಗಿಸಿಕೊಂಡು ಅರಮನೆಯಲ್ಲಿನ ತನ್ನ ಅಂತಃಪುರಕ್ಕೆ ತೆರಳಿದನು‌.
ತನ್ನ ಮಡದಿ ಮಹಾರಾಣಿಯನ್ನು ಕರೆದು ಬಳಿಯಲ್ಲಿ ಕುಳಿತುಕೊಳ್ಳಲು ಹೇಳಿದನು. ಹಾಗೆಯೇ ಆ ದಿನ ನಡೆದ ಘಟನೆಯನ್ನೆಲ್ಲ ವಿವರಿಸಿದನು. "ನಾನು ರಾಜ. ನನಗೆ ತಿಳಿಯದೇ ಇರುವ ವಿದ್ಯೆಯೇ ಇಲ್ಲ ಎಂದನಿಸಿದ್ದೆ. ಆದರೆ ಮರ ಏರಿ ಹಣ್ಣುಗಳನ್ನು ಕೊಯ್ಯುವ ಕಲೆ ನನಗೆ ತಿಳಿದೇ ಇಲ್ಲ..."
"ನಾನು ರಾಜ. ಸುಖದ ಅರಮನೆಯಲ್ಲಿ ಹೇಗೆ ಬೇಕಾದರೂ ಮಲಗುವೆ. ಎಂದೆನಿಸಿದ್ದೆ.  ಆದರೆ ಅಲ್ಲೊಬ್ಬ ಮಣ್ಣಿನ ಮೇಲೆಯೇ ಸುಖವಾಗಿ ಮಲಗಿದ್ದ. ನನಗೆ ಅಲ್ಲಿ ನಿದಿರೆಯೇ ಬರಲಿಲ್ಲ.."
"ನಾನು ರಾಜ. ಆದರೂ ಈಜಿ ನದಿ ದಾಟಲು ತಿಳಿದಿಲ್ಲ.."
"ಈ ಅರಮನೆಯಿಂದ ಒಮ್ಮೆಯೂ ಹೊರಗೆ ಹೋದವನೇ ಅಲ್ಲ. ಈ ಆಸ್ತಿ ಧನಕನಕದಲ್ಲಿಯೇ ನಾನು ಬದುಕುತ್ತಾ ಇದ್ದೇನೆ. ಇದನ್ನೇ ಸುಖ ಜೀವನ ಎಂದು ಭಾವಿಸಿರುವೆ. ಆದರೆ ಅವರೆಲ್ಲ ಅಷ್ಟೋ ಇಷ್ಟೋ ಹಣದಲ್ಲಿ ಹೇಗೆ ಸುಖವಾಗಿದ್ದಾರೆ ನೋಡು.
ಆಗ ಮಹಾರಾಣಿ ಹೇಳಿದಳಂತೆ, "ನೀವು ರಾಜ" ಎಂಬ ಮನಸ್ಥಿತಿಯೇ ನಿಮಗೆ ಮುಳ್ಳಾಗಿದೆ‌. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿರಿ. ಆಗ ಎಲ್ಲವೂ ನಿಮಗೆ ಸಿದ್ಧಿಸುತ್ತದೆ.  ಪ್ರಜೆಗಳು ಬಹಳ ಕಷ್ಟದಲ್ಲಿ ಅವರ ಬದುಕು ನಡೆಸುತ್ತಾ ಇದ್ದಾರೆ. ನೀವು ಅರಿತುಕೊಳ್ಳಿ. ಎಂದು. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಯಿತು‌. ಹಣ-ವೈಭೋಗದಿಂದ ಸುಖಸಿಗುವುದಿಲ್ಲ ಎಂದು. ಮುಂದೆ ಪ್ರಜೆಗಳ ಒಳಿತಿಗಾಗಿ ಅನೇಕ ನಿಯಮಗಳನ್ನು ಜಾರಿಗೆ ತಂದನು. ಅವರಿಗಾಗಿಯೇ ಬದುಕಿದನು.
.
.
ಸಿಂಧು ಭಾರ್ಗವ್. ಬೆಂಗಳೂರು-೨೧


೨)

Wednesday, 5 June 2019

Story_Don't be selfish ಸ್ವಾರ್ಥಿಯಾಗದಿರಿ

ಮಕ್ಕಳ ಕಥೆ:-  ಸ್ವಾರ್ಥಿಯಾಗದಿರಿ
Google pick

ಕಾನನದ ಮಧ್ಯದಲ್ಲಿ ಒಂದು ಗಿಡುಗನ ಗೂಡು ಹಾಗೂ ಕಾಗೆಯ ಗೂಡಿತ್ತು. ಎರಡೂ ತಮ್ತಮ್ಮ ಗೂಡಿನಲ್ಲಿ ಮರಿಗಳ ಜೊತೆಗೆ ವಾಸವಾಗಿದ್ದವು. "ಚೀವ್ ಚೀವ್..." ಎಂಬ ಚಿಲಿಪಿಲಿಯು ಯಾವಾಗಲೂ  ಕೇಳಿಸುತಲಿತ್ತು. ಗಿಡುಗನು ತನ್ನ ಗೂಡಿನ ಮೇಲೆಯೇ ಗಸ್ತು ಹೊಡೆಯುತ್ತಾ ಇರುತ್ತಿತ್ತು. ದೂರದೂರಿಗೆ ಹಾರಿ ಹೋಗಿ ಗಂಡು ಗಿಡುಗವು ಆಹಾರ ತರುವ ತನಕ ಹೆಣ್ಣು ಗಿಡುಗವು ಮರಿಗಳನ್ನು ಕಾಯುತಲಿತ್ತು. ಇದನ್ನೆಲ್ಲ ದೂರದಿಂದ  ನೋಡುತ್ತಿದ್ದ ಕಾಗೆಗೆ , "ಆ ಗೂಡಿನಲ್ಲಿವೇನಿರಬಹುದು. ಈ ಗಿಡುಗ ಏಕೆ ಗಸ್ತು ಹೊಡೆಯುತ್ತಿದೆ.."ಎಂದು ಪ್ರಶ್ನೆ ಮೂಡಿತು‌. ಒಮ್ಮೆ ಹೋಗಿ ನೋಡಲೇ ಬೇಕು ಎಂಬ ಕುತೂಹಲ ಹೆಚ್ಚಿತು. ಆದರೆ ಆ ಹೆಣ್ಣು ಗಿಡುಗವೂ ಎಲ್ಲಿಗೂ ಕದಲುತ್ತ ಇರಲಿಲ್ಲ‌.

ಒಮ್ಮೆ ಆ ಸಮಯ ಬಂದೇ ಬಿಟ್ಟಿತು. ಹೆಣ್ಣು ಗಿಡುಗ ಆಕಾಶದೆತ್ತರಕ್ಕೆ ಹಾರಿ ಮಾಯವಾಯಿತು. ಆಗ ಕಾಗೆಗೆ ಬಹಳ ಸಂತೋಷವಾಗಿ  ಗಿಡುಗನ ಗೂಡಿನ ಬಳಿ ಹಾರಿ ಬಂದಿತು. ಅಲ್ಲಿ ನೋಡಿದರೆ ಪರಮಾಶ್ಚರ್ಯ. " ಗಿಡುಗನಿಗೆ ಪುಟ್ಟಪುಟ್ಟ ಮೂರು ಮರಿಗಳಿದ್ದವು. ಎಳೆಮರಿಗಳ ನೋಡಿ ಕಾಗೆಯೆ ಬಾಯಲ್ಲಿ ನೀರು ಬಂದಿತು. ಹೇಗಾದರೂ ಮಾಡಿ ಇದನ್ನು ಹೊತ್ತೊಯ್ದು ತನ್ನ ಮರಿಗಳಿಗೆ ಆಹಾರವಾಗಿ ಕೊಡಬೇಕು ಎಂಬ ಕೆಟ್ಟ ಆಲೋಚನೆ ಮಾಡಿತು. ಹಾಗೆಯೇ ಒಂದನ್ನು ಅಲ್ಲಿಯೇ ತಿಂದು, ಒಂದನ್ನು ತನ್ನ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಸಾಯಿಸಿತು. ಹಾಗೆಯೇ ಸತ್ತ ಗಿಡುಗನ ಮರಿಯನ್ನು ಕಾಲಿನಲ್ಲಿ ಬಿಗಿಹಿಡಿತು ತನ್ನ ಗೂಡಿನತ್ತ ಹಾರಿಹೋಯಿತು.

ಅಲ್ಲಿ ನೋಡಿದರೆ ಏನ್ ಆಶ್ಚರ್ಯ. ಗಾಬರಿ ಹುಟ್ಟಿಸುವ ಘಟನೆ ನಡೆದಿತ್ತು. ತನ್ನ ಮರಿಗಳ ಪುಕ್ಕಗಳೆಲ್ಲ ಚೆಲ್ಲಪಿಲ್ಲಿಯಾಗಿ ಬಿದ್ದಿದ್ದವು. ಮರಿಗಳು ಕಾಣಿಸುತ್ತಿಲ್ಲ. "ಅಯ್ಯೋ... ನನ್ನ ಮರಿಗಳೆಲ್ಲಿ ??" ಎಂದು ಗೋಳಾಡಿತು. "ನಾನು ಅವುಗಳಿಗೆ ತಂದ ಈ ಹಸಿ ಮಾಂಸವನ್ನು ಏನು ಮಾಡಲಿ. ಇದನ್ನು ತಿನ್ನಲು ಈಗ ನನ್ನ ಮರಿಗಳೇ ಇಲ್ಲವಲ್ಲ .." ಎಂದು ಕೊರಗುತ್ತಾ  ಕುಳಿತಿತು. ಆಗ ದೂರದಲ್ಲಿ ಅದೇ ಗಿಡುಗ ತನ್ನ ಕಾಲಿನಲ್ಲಿ ಏನೋ ಆಹಾರ ಹಿಡಿದಿರುವುದು ಕಾಣಿಸಿತು. ಏನೆಂದು ಕಾಗೆ ಅದರ ಕಡೆಗೆ ಧಾವಿಸಿ ನೋಡಿದರೆ ತನ್ನ ಮರಿಯ ಹಸಿಮಾಂಸವೇ ಆಗಿತ್ತು. ಅತ್ತ ಗಿಡುಗನಿಗೆ ಉಳಿದಿದ್ದ ಒಂದು ಮರಿ ಗಾಬರಿಯಿಂದ ಕಿರುಚುತ್ತ ಅಮ್ಮ ಬರುವುದನ್ನೇ ಕಾಯುತಲಿತ್ತು.

ನೀತಿ: ನಾವು ಕೇಡು ಬಯಸಿದರೆ ನಮಗೂ ಕೇಡು ಸಂಭವಿಸುತ್ತದೆ ‌ ಕಾಗೆ ಗಿಡುಗನ ಮರಿಗಳನ್ನು ಸಾಯಿಸಿದ ಹಾಗೆ ಗಿಡುಗವೂ ಸ್ವಾರ್ಥಿಯಾಗಿ ಕಾಗೆಯ ಮರಿಯನ್ನು ಸಾಯಿಸಿತ್ತು.


- ಸಿಂಧು ಭಾರ್ಗವ್.
 ಬೆಂಗಳೂರು- ೨೧

Tuesday, 4 June 2019

ಪರಿವರ್ತನೆ

ಮಕ್ಕಳ ಕಥೆ: ಪರಿವರ್ತನೆ(ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬಾಳಿರಿ)




ಒಬ್ಬ ರಾಜ ತನ್ನ ರಾಜ್ಯವನ್ನು ನೋಡಲು ಕುದುರೆಯನೇರಿ ಹೊರಟನು. ಅವನ ರಾಜ್ಯದ ಜನರ ಸ್ಥಿತಿಗತಿಯನ್ನು ಪರೀಕ್ಷಿಸಿ ಕಷ್ಟನೋವುಗಳನ್ನು ಕೇಳಿ ಅವರಿಗೆ ಸಮಾಧಾನ ಮಾಡಿ, ಕೈಲಾದ ಸಹಾಯ ಮಾಡಲು ಹೊರಟಿದ್ದನಂತೆ. ಹೀಗೆ ಒಂದು ಊರಿನ ಹಾದಿಯಲ್ಲಿ ಹೋಗುವಾಗ ತುಂಬಾ ಹಸಿವಾಯಿತಂತೆ. ತಿನ್ನಲು ಏನೂ  ಕೊಂಡೊಯ್ದಿರದ ಕಾರಣ ಸುತ್ತಮುತ್ತ ನೋಡಿದ. ಆಗ ಒಂದು ಬ್ರಹದಾಕಾರದ ಮರದಲ್ಲಿ ತುಂಬಾ ಹಣ್ಣುಗಳು ಜೋತುಬಿದ್ದಿದ್ದವು. ಅದನ್ನು ಕಂಡು ಬಾಯಿಯಲ್ಲಿ ನೀರು ಬಂದಿತು. ಆದರೆ ಆ ಮರ ಎತ್ತರವಿದ್ದ ಕಾರಣ ಒಂದು ಹಣ್ಣೂ ಕೈಗೆ ಎಟಕುತ್ತ ಇರಲಿಲ್ಲ. ಹಾಗಾಗಿ ಅವನಿಗೆ ಬೇಸರವಾಯಿತು‌. ಆಗ ಅಲ್ಲೇ ಇದ್ದ ಒಬ್ಬ ಮರ ಕಡಿಯುವವನಲ್ಲಿ ಆ ಹಣ್ಣುಗಳನ್ನು ಕೊಯ್ದುಕೊಡಲು ಹೇಳಿದನು. ಅವನು "ಓ ನಮ್ಮ ಮಹರಾಜರು. ನಿಮಗೆ ಇಲ್ಲ ಎನ್ನಲಾಗುವುದೇ?.." ಎಂದು ಸಾಕಷ್ಟು ಹಣ್ಣನ್ನು ಕೊಯ್ದು ಅವನಿಗೆ ಬುಟ್ಟಿಯಲ್ಲಿ ತುಂಬಿಸಿಕೊಟ್ಟನಂತೆ. ಆಗ ಮೊದಲೇ ಹಸಿದಿದ್ದ ರಾಜನು ಆ ಹಣ್ಣುಗಳನ್ನು ನೋಡಿ ಗಬಗಬ ತಿಂದನಂತೆ. ದೀರ್ಘವಾಗಿ ಒಂದು ತೇಗು ಬರಿಸಿ "ಮೆಚ್ಚಿದೆ ನಿನ್ನ . ನೀನು ಮಾಡಿದ ಸಹಾಯಕ್ಕೆ ತಗೋ ಕೈತುಂಬಾ ಚಿನ್ನದ ನಾಣ್ಯಗಳನ್ನು ಕೊಡುವೆ .." ಎಂದು ಹೇಳಿ ಒಂದು ರೇಶಿಮೆ ಗಂಟನ್ನು ನೀಡಿದನು‌. ಕುದುರೆಯನ್ನೇರಿ ಮುಂದೆ ಹೋದನು. ಹೀಗೆ ಸಾಗುವಾಗ ಒಂದು ಆಲೋಚನೆ ಹೊಳೆಯಿತಂತೆ. "ನಾನು ರಾಜನಾದರೂ ನನಗೆ ಒಂದು ಮರ ಏರಲು ತಿಳಿದಿಲ್ಲ. ಇದು ಎಂತಹ ಅವಮಾನ.." ಎಂದು ಮನದಲ್ಲೇ ಮರುಗಿದನು.

ನಂತರ ಬಹಳಷ್ಟು ದೂರ ಸಾಗುತ್ತಲೇ ಬಿಸಿಲು ಹೆಚ್ಚಾಗಿ ಸುಸ್ತಿನ ಜೊತೆಗೆ ನಿದಿರೆ ಬರಲು ಶುರುವಾಯಿತು. ಸುತ್ತಮುತ್ತ ನೋಡಿದರೆ ಎಲ್ಲೂ ಮಲಗಲು ಜಾಗವಿಲ್ಲ . ಅವನಿಗೆ ಏನು ಮಾಡುವುದು ಎಂದು ತಿಳಿಯದೇ ಕುದುರೆಯಿಂದ ಕೆಳಗಿಳಿದು  ಅಲ್ಲೇ ಮರದ ಕೆಳಗೆ ಕುಳಿತನು‌ . ಹಾಗೆ ಮಲಗಿದನು. ಆದರೆ ಎಷ್ಟು ಸಮಯವಾದರೂ ನಿದಿರೆ ಬರುತ್ತಿರಲಿಲ್ಲ. ಆಗ ದೂರದಲ್ಲಿ ಒಬ್ಬ ಮರಗೆಲಸದವನು ತನ್ನ ತಲೆಗೆ ಕಟ್ಟಿದ್ದ ತುಂಡು ಬಟ್ಟೆಯನ್ನು ಹಾಸಿ ಗಾಢ ನಿದಿರೆಗೆ ಜಾರಿದ್ದ. ಅವನ ಗೊರಕೆಯ ಸದ್ದು ರಾಜನವರೆಗೂ ಕೇಳಿಸುತಲಿತ್ತು‌ . ರಾಜನಿಗೆ ಮತ್ತೆ ಯೋಚನೆ ಹತ್ತಿತು‌. "ಅವನಿಗೆ ಆ ಭಗವಂತ ಅದೆಷ್ಟು ಸುಖನಿದ್ರೆ ಕರುಣಿಸಿದ್ದಾನೆ. ಏನೂ ಇಲ್ಲದೆ, ಕಲ್ಲು ಮಣ್ಣು ತರಗೆಲೆಯ ಮೇಲೆಯೇ ಗಾಢನಿದಿರೆ ಮಾಡುತ್ತಿರುವನಲ್ಲ.. ನನಗೇಕೆ ನಿದಿರೆ ಬರುತ್ತಿಲ್ಲ.." ಎಂದು. ಮತ್ತೆ ಅವನ ಕರೆದು ಕೇಳಿದನಂತೆ "ನಿನಗೆ ಹೇಗೆ ಇಷ್ಟು ನಿದಿರೆ ಬರುತ್ತದೆ. ಈ ಮಣ್ಣು ಧೂಳಿನಲ್ಲಿ ನನಗೆ ಕೂರಲು ಮನಸ್ಸಾಗುತ್ತಿಲ್ಲ.." ಎಂದು. ಆಗ ಮರಗೆಲಸದವನು ಒಮ್ಮೆ ರಾಜನನ್ನು ನೋಡಿ ಖುಷಿಯಾಗಿ ಮತ್ತೆ ಬೆಸ್ತುಬಿದ್ದು ಸಾವರಿಸಿಕೊಂಡು  ಹೇಳಿದನಂತೆ " ಬುದ್ಧೀ ನೀವು. ನೀವೇಕೆ ಇಲ್ಲಿ ಬಂದಿರಿ‌ ನಮ್ಮ ಬದುಕೇ ಹೀಗೆ. ಕಷ್ಟಪಟ್ಟು ದುಡಿದರೆ ದೇಹಕ್ಕೆ ಆಯಾಸವಾಗುತ್ತದೆ. ಆಗ ಎಲ್ಲಿ ಮಲಗಿದರೂ ನಿದಿರೆ ಬರುತ್ತದೆ. ನಮ್ಮದು ಮರಕಡಿಯುವ ಕೆಲಸ ಸ್ವಾಮಿ. ರೆಟ್ಟೆ ಮುರಿದು ಕೆಲಸ ಮಾಡಬೇಕು. ಆಗಲೇ ಮೂರ್ಕಾಸು ಸಿಗುತ್ತದೆ. ಎಂದು.  ರಾಜನಿಗೆ ಬೇಸರವಾಯಿತು. ತಾನು ತಂದಿದ್ದ ರೇಶಿಮೆ ಗಂಟನ್ನು ಅವನ ಕೈಗಿತ್ತು ಕುದುರೆಯನ್ನೇರಿದನು. ದಾರಿ ಮಧ್ಯೆಯಲ್ಲಿ ಮತ್ತೆ ಚಿಂತೆ ಕಾಡಿತು‌.

ಹೀಗೆ ಮುಂದೆ ಹೋಗುವಾಗ ನದಿ ಕಾಣಿಸಿತು. ರಾಜನಿಗೆ ಈಜು ಬರುತ್ತಿರಲಿಲ್ಲ. ಅಲ್ಲಿ ನೋಡಿದರೆ ಚಿಕ್ಕ ಮಕ್ಕಳೆಲ್ಲ ನೀರಿನಲ್ಲಿ ಈಜುತ್ತಾ ಆಟವಾಡುತ್ತಾ ಇದ್ದರು. ಕತ್ತಲಾಗುತ್ತಾ ಬಂದಿತ್ತು. ರಾಜನಿಗೆ ನದಿ ದಾಟಿ ಅರಮನೆ ತಲುಪಲೇ ಬೇಕಾಯಿತು. ಆದರೆ ಏನು ಮಾಡುವುದು.? ಕೂಡಲೇ ಅಲ್ಲಿದ್ದ ಜನರನ್ನು ಕರೆದ‌. ಹೇಳಲು ಮುಜುಗರವಾಯಿತು. ಆದರೆ ತೋರಿಸಿಕೊಳ್ಳದೇ ಗಾಂಭೀರ್ಯದಿಂದ "ನಾನು ರಾಜ , ಆಜ್ಞೆ ಮಾಡುತ್ತಿರುವೆ. ನನ್ನನ್ನು ಮತ್ತು ಕುದುರೆಯನ್ನು ಈ ನದಿಯಿಂದ ದಾಟಿಸಿ ಆ ದಡಕ್ಕೆ ಕೊಂಡೊಯ್ಯಿರಿ..." ಎಂದು. ಜನರೆಲ್ಲರೂ ಓಡೋಡಿ ಬಂದು ರಾಜನನ್ನೂ ಹೊತ್ತು ನದಿಯಲ್ಲಿ ನಡೆದರು‌ ಕುದುರೆಯನ್ನು ಎಳೆದುಕೊಂಡು ಸಾಗಿ ದಡ ಮುಟ್ಟಿಸಿದರು. ರಾಜನಿಗೆ ಒಳಗೊಳಗೆ ದಡ ಸೇರಿದ ಖುಷಿಯಾಯಿತು. ಮತ್ತೆ ತಂದಿದ್ದ ರೇಶಿಮೆ ಗಂಟನ್ನು ಅವರ ಕೈಗಿಟ್ಟು ಈ ಚಿನ್ನದ ನಾಣ್ಯಗಳನ್ನು ಎಲ್ಲರೂ ಹಂಚಿಕೊಳ್ಳಲು ತಿಳಿಸಿದನು. ಕುದುರೆಯನ್ನೇರಿ ಅರಮನೆ ಕಡೆಗೆ ಸಾಗಿದನು. ಆದರೆ ಏನೇನೋ ಪ್ರಶ್ನೆಗಳು, ಚಿಂತೆಗಳು ಕಾಡಿದವು. ಹಾಗೆ ತಲೆತಗ್ಗಿಸಿಕೊಂಡು ಅರಮನೆಯಲ್ಲಿನ ತನ್ನ ಅಂತಃಪುರಕ್ಕೆ ತೆರಳಿದನು‌.

ತನ್ನ ಮಡದಿ ಮಹಾರಾಣಿಯನ್ನು ಕರೆದು ಬಳಿಯಲ್ಲಿ ಕುಳಿತುಕೊಳ್ಳಲು ಹೇಳಿದನು. ಹಾಗೆಯೇ ಆ ದಿನ ನಡೆದ ಘಟನೆಯನ್ನೆಲ್ಲ ವಿವರಿಸಿದನು. "ನಾನು ರಾಜ. ನನಗೆ ತಿಳಿಯದೇ ಇರುವ ವಿದ್ಯೆಯೇ ಇಲ್ಲ ಎಂದನಿಸಿದ್ದೆ. ಆದರೆ ಮರ ಏರಿ ಹಣ್ಣುಗಳನ್ನು ಕೊಯ್ಯುವ ಕಲೆ ನನಗೆ ತಿಳಿದೇ ಇಲ್ಲ..."
"ನಾನು ರಾಜ. ಸುಖದ ಅರಮನೆಯಲ್ಲಿ ಹೇಗೆ ಬೇಕಾದರೂ ಮಲಗುವೆ. ಎಂದೆನಿಸಿದ್ದೆ.  ಆದರೆ ಅಲ್ಲೊಬ್ಬ ಮಣ್ಣಿನ ಮೇಲೆಯೇ ಸುಖವಾಗಿ ಮಲಗಿದ್ದ. ನನಗೆ ಅಲ್ಲಿ ನಿದಿರೆಯೇ ಬರಲಿಲ್ಲ.."
"ನಾನು ರಾಜ. ಆದರೂ ಈಜಿ ನದಿ ದಾಟಲು ತಿಳಿದಿಲ್ಲ.."
"ಈ ಅರಮನೆಯಿಂದ ಒಮ್ಮೆಯೂ ಹೊರಗೆ ಹೋದವನೇ ಅಲ್ಲ. ಈ ಆಸ್ತಿ ಧನಕನಕದಲ್ಲಿಯೇ ನಾನು ಬದುಕುತ್ತಾ ಇದ್ದೇನೆ. ಇದನ್ನೇ ಸುಖ ಜೀವನ ಎಂದು ಭಾವಿಸಿರುವೆ. ಆದರೆ ಅವರೆಲ್ಲ ಅಷ್ಟೋ ಇಷ್ಟೋ ಹಣದಲ್ಲಿ ಹೇಗೆ ಸುಖವಾಗಿದ್ದಾರೆ ನೋಡು.

ಆಗ ಮಹಾರಾಣಿ ಹೇಳಿದಳಂತೆ, "ನೀವು ರಾಜ" ಎಂಬ ಮನಸ್ಥಿತಿಯೇ ನಿಮಗೆ ಮುಳ್ಳಾಗಿದೆ‌. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿರಿ. ಆಗ ಎಲ್ಲವೂ ನಿಮಗೆ ಸಿದ್ಧಿಸುತ್ತದೆ.  ಪ್ರಜೆಗಳು ಬಹಳ ಕಷ್ಟದಲ್ಲಿ ಅವರ ಬದುಕು ನಡೆಸುತ್ತಾ ಇದ್ದಾರೆ. ನೀವು ಅರಿತುಕೊಳ್ಳಿ. ಎಂದು. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಯಿತು‌. ಹಣ-ವೈಭೋಗದಿಂದ ಸುಖಸಿಗುವುದಿಲ್ಲ ಎಂದು. ಮುಂದೆ ಪ್ರಜೆಗಳ ಒಳಿತಿಗಾಗಿ ಅನೇಕ ನಿಯಮಗಳನ್ನು ಜಾರಿಗೆ ತಂದನು. ಅವರಿಗಾಗಿಯೇ ಬದುಕಿದನು.

ಸಿಂಧು ಭಾರ್ಗವ್.
ಬೆಂಗಳೂರು-೨೧