Friday, 1 October 2021

Kannada Nursery Rhymes For Kids ಶಿಶುಗೀತೆಗಳು ಮಕ್ಕಳ ಸಾಹಿತ್ಯ

ಮಕ್ಕಳ ಸಾಹಿತ್ಯ ಐದು ಶಿಶುಗೀತೆಗಳು

Kannada Nursery Rhymes. Kids songs Lyrics. 


೧) ಮುದ್ದು ತಮ್ಮ

ಬಾ ಬಾರೋ ತಮ್ಮ ನನ್ನ ಪ್ರೀತಿಯ ತಮ್ಮ
ಬಾ ಬಾರೋ ತಮ್ಮ ಅಮ್ಮನ ಮುದ್ದು ಗುಮ್ಮ
ಗೊಂಬೆ ಜೊತೆಗೆ ಆಟವಾಡಿ ಕುಣಿದಾಡುವ
ಕಿಟಕಿಯಿಂದ ಹೊರನೋಡಿ ಚಪ್ಪಾಳೆ ತಟ್ಟುವ
ಅಂಬೆಗಾಲಿಡುತ ಮನೆಯೆಲ್ಲ ಸುತ್ತುವ
ಗೊಂಬೆಯ ಕಸಿದರೆ ಬೇಕೆಂದು ಹಠಹಿಡಿಯುವ
ಅಮ್ಮ ಬಂದು ಎತ್ತಿಕೊಂಡು ಮುತ್ತನಿಟ್ಟರೆ
ಕಿಲಕಿಲನೆ ನಗುತ ಅಳುವ ನಿಲ್ಲಿಸುವ!!



(೨) ಹಕ್ಕಿ ಗೂಡು

ನಮ್ಮ‌ ಮನೆಯ ಹಿತ್ತಲಲ್ಲಿ ತೊಗರಿ ಗಿಡವೊಂದಿದೆ
ಗುಬ್ಬಿಯೊಂದು ಸಣ್ಣದಾದ ಗೂಡುಕಟ್ಟಿದೆ
ಚಿಕ್ಕ ಚಿಕ್ಕ ಮೊಟ್ಟೆಯಿಟ್ಟು ಕಾವು ಕೊಡುತಲಿರುವುದು
ಹಗಲು ರಾತ್ರಿ ತತ್ತಿಯನ್ನು ಆರೈಕೆ ಮಾಡುವುದು

ದಿನಗಳುರುಳಿ ಮೊಟ್ಟೆ ಒಡೆದು ಮರಿಗಳು ಹೊರಬಂದವು
ಗುಬ್ಬಿಯ ಸಂತಸವು ಮುಗಿಲು ಮುಟ್ಟಿದೆ!!



(೩) ಪುಟ್ಟನ ಪ್ರಶ್ನೆ

ಅಮ್ಮ ಅಮ್ಮ ಚಿಟ್ಟೆಗಳೇಕೆ
ಹೂವಿಂದ ಹೂವಿಗೆ ಹಾರುವವು?
ಸಿಹಿಸಿಹಿಯಾದ ಮಕರಂದವ ಹೀರಲು
ಹೂವುಗಳ ಭೇಟಿ ಮಾಡುವವು..

ಅಮ್ಮ ಅಮ್ಮ ಮೀನುಗಳೇಕೆ ನೀರಿನಲಿ ಈಜುವವು
ನೆಲದಲಿ ಮೀನು ಉಸಿರಾಡಲು ಆಗದೆ ಹೊರಳಿ ಹೊರಳಿ ಸಾಯುವವು
ಅಮ್ಮ ಅಮ್ಮ ಮೋಡಗಳೇಕೆ ಕಪ್ಪು ಕಪ್ಪಾಗಿದೆ?!
ಮಳೆಯು ಬರಲು ಕರಿಮೋಡವು ಬೇಕು ಮಗುವೆ..




(೪) ಬಣ್ಣದ ಗೊಂಬೆ

ನನ್ನಯ ಮುದ್ದಿನ ಗೊಂಬೆ
ಬಣ್ಣ ಬಣ್ಣದ ಗೊಂಬೆ
ಹಬ್ಬದಲ್ಲಿ ಕಂಡ ಗೊಂಬೆ
ಅಪ್ಪ ಕೊಡಿಸಿದ ಗೊಂಬೆ

ಅಣ್ಣನು ಕಸಿದುಕೊಂಡನು
ನೀರಲಿ ಎಸೆದು ಬಿಟ್ಟನು
ಗೊಂಬೆಯ ಬಣ್ಣವು ಕರಗಿತು
ಬೇಸರದಿ ಅಳುವು ಬಂದಿತು!!




(೫) ಪುಟ್ಟಿಯ ಕೋಪ

ಅಮ್ಮನ ಮೇಲೆ ಬಂದಿದೆ ಕೋಪವು
ಅಂಗಳದಲ್ಲಿ ಕುಳಿತಳು ಪುಟ್ಟಿಯು
ನ್ನವ ಕಲಸಿ ಅಮ್ಮನು ಬಂದರು
ಆಗಸದಲ್ಲಿನ ಚಂದ್ರನ ತೋರಿಸಿದರು

ಹುಣ್ಣಿಮೆ ಬೆಳಕು ಅಂಗಳದಲ್ಲಿ
ಮಲ್ಲಿಗೆ ಮೊಗ್ಗು ಅರಳಿದೆ ನೋಡಲ್ಲಿ
ಬಿಡು ಮಗುವೆ ಕೋಪವನು
ಗೊಂಬೆಯ ನಾನು ಕೊಡಿಸುವೆನು

ಚಂದಿರನ ತೋರಿಸುತ , ಮಲ್ಲಿಗೆಯ ಕೈಗಿಡುತ
ಅಮ್ಮ ಕತೆಯನು ಹೇಳುತ ಊಟವ ಮಾಡಿಸಿದಳು..
ಮುನಿಸನು ಮರೆತು ಪುಟ್ಟಿಯು ಅಮ್ಮನ ಅಪ್ಪಿಕೊಂಡಳು..

- ಸಿಂಧು ಭಾರ್ಗವ, ಬೆಂಗಳೂರು



Tuesday, 28 September 2021

ಮಕ್ಕಳ ನೀತಿ ಕತೆ ತಂದೆಯ ಜಾಣ್ಮೆ

 

Source images Kannada kids Stories

ಅಜ್ಜಿ ಹೇಳಿದ ಕಥೆ: ತಂದೆಯ ಜಾಣ್ಮೆ

ಪುಟ್ಟಿ ರಕ್ಷಾ ಬಂಧನದ ದಿನ ಬೇಸರ ಮಾಡಿಕೊಂಡು ಕುಳಿತಿದ್ದಳು. ನನಗೆ ಅಣ್ಣ ಇಲ್ಲ. ರಾಖಿ ಕಟ್ಟಬೇಕು ಎಂದು ಅಳುತ್ತಿದ್ದಳು. ಅಮ್ಮ ಎಷ್ಟು ಸಮಾಧಾನ ಮಾಡಿದರು ಸರಿಯಾಗಲಿಲ್ಲ. ಶಾಲೆಗೆ ಹೋಗುವುದಿಲ್ಲ ಎಂದು ಅಳುತ್ತಿದ್ದಳು. "ನನಗೆ ಅಣ್ಣ ಬೇಕು...." ಎಂದು ಅಳುವುದು ಜೋರಾಯಿತು. ತಂದೆಗೆ ತಲೆಬಿಸಿಯಾಯಿತು‌. ಆಗ ಒಂದು ಉಪಾಯ ಮಾಡಿದರು. ಅಂಗಡಿಗೆ ಹೋಗಿ ಸುಂದರವಾದ
ರಾಖಿಗಳನ್ನು ತಂದರು. ನಂತರ ಅಕ್ಕಪಕ್ಕದ ಮನೆಯ ಮಕ್ಕಳನ್ನೆಲ್ಲ ಕರೆದು ಒಂದೊಂದು ರಾಖಿ ನೀಡಿ "ನಿಮ್ಮ ಪುಟ್ಟ ತಂಗಿಗೆ ಪ್ರೀತಿಯಿಂದ ರಾಖಿ ಕಟ್ಟಲು ಹೇಳಿ.." ಎಂದರು. ರಕ್ಷಾ ಬಂಧನಕ್ಕೆ ಮೆರುಗು ಬಂದಿತು. ಮನೆಗೆ ಬಂದ ಮಕ್ಕಳಿಗೆ ಸಿಹಿಯನ್ನು ಹಂಚಿದರು. ಮಕ್ಕಳಿಗೂ ಖುಷಿಯಾಯಿತು. ಪುಟ್ಟಿಗೆ ಕೂಡ ಎಲ್ಲಿಲ್ಲದ ಸಂಭ್ರಮ.

- ಸಿಂಧು ಭಾರ್ಗವ, ಬೆಂಗಳೂರು




ಮಕ್ಕಳ ಪದ್ಯ ಬೆಳ್ಳಕ್ಕಿ ಹಾಗೂ ಸಲಗನ ಗೆಳೆತನ

 



ಮಕ್ಕಳ ಪದ್ಯ  : ಬೆಳ್ಳಕ್ಕಿ ಹಾಗೂ ಸಲಗನ ಗೆಳೆತನ ( Friendship)

ಕೆರೆಯ ಬಳಿಯು ಸಲಗವೊಂದು
ಹುಲ್ಲು ತಿನ್ನಲು ಬರುವುದು
ಬೆಳ್ಳಕ್ಕಿಯು ಅದರ ಬೆನ್ನನೇರಿ
ಕುಳಿತುಕೊಳುವುದು//

ಹೇನುಗಳ ಕಾಟವೊಮ್ಮೆ
ವಿಪರೀತ ಅನಿಸಿತು
ಗಜದ ಮೈಗೆ ಕಚ್ಚಿ ಕಚ್ಚಿ
ರಕುತ ಹೀರುತ್ತಿದ್ದವು//

ಆನೆ ತನ್ನ ಸೋಂಡಿನಿಂದ
ಮೈಗೆ ಬಡಿದುಕೊಳ್ಳಲು,
ಕೊಕ್ಕರೆಯು ಕ್ಷಣಕೆ ಬಂದು
ಸಲಹೆಯನ್ನು ನೀಡಿತು//

ನಿನ್ನ ಮೈಯಲಿರುವ ಹೇನ
ನಾನು ತಿನುವೆ ಎಂದಿತು
ಹರುಷದಿಂದ ಗಜವು ಒಪ್ಪಿ
ಚಿಂತೆ ಕಳೆದುಕೊಂಡಿತು//

ಕೊಕ್ಕರೆಯು ಹೊಟ್ಟೆ ತುಂಬಾ
ಹೇನುಗಳ ತಿಂದಿತು
ಗಜದ ಜೊತೆಗೆ ಅನುದಿನವು
ನೇಹ ಬೆಳೆಸಿಕೊಂಡಿತು//

- ಸಿಂಧು ಭಾರ್ಗವ ,ಬೆಂಗಳೂರು

ಶಿಶುಗೀತೆಗಳು ಮಕ್ಕಳ ಸಾಹಿತ್ಯ ವಿಭಾಗ ಸಿಂಧು ಭಾರ್ಗವ ಅವರಿಂದ

 

ಐದು ಶಿಶುಗೀತೆಗಳು - 

ಮಕ್ಕಳ ಸಾಹಿತ್ಯ ವಿಭಾಗ ಸಿಂಧು ಭಾರ್ಗವ ಅವರಿಂದ 



Source Images. Kannada Kids Rhymes


ಶಿಶುಗೀತೆ : ಚಿಟ್ಟೆ

ಕಪ್ಪು ರೆಕ್ಕೆಯ ಚಿಟ್ಟೆಯೇ
ಬಿಳಿಯ ಚುಕ್ಕಿಯನ್ಯಾರು ಇಟ್ಟರು??
ನಿನ್ನಯ ರೂಪ ಸೌಂದರ್ಯವ
ಸುಂದರವಾಗಿಸಿದವರು ಯಾರು??

ಹೂವಿಂದ ಹೂವಿಗೆ ಹಾರುತ
ಗುಸುಗುಸು ಮಾತನಾಡುವೆ ನೀನು
ಹೂವಿನ ಮಧುವನು ಹೀರುತ
ಹೊಟ್ಟೆಯ ತುಂಬಿಸಿಕೊಳ್ಳುವೆ ನೀನು

(೨)

ಕಾಲಗಳು

ಮಳೆಗಾಲ ಬೇಡವೇ ಬೇಡವಮ್ಮ
ಶಾಲೆಗೆ ಹೋಗಲು ಅಡೆತಡೆಯಮ್ಮ
ಸಮವಸ್ತ್ರವು ಹಾಳಾಗುವುದು
ಗುಡುಗು ಮಿಂಚಿಗೆ ಮನ ಹೆದರುವುದು

ಬೇಸಿಗೆ ಕಾಲವೇ ಬಲುಚಂದ
ಮನೆಮಂದಿಯೆಲ್ಲ ಜೊತೆಗೆ ಸೇರಿ
ಹಪ್ಪಳ ಸೆಂಡಿಗೆ ಮಾಡುವ ಚಂದ

ಚಳಿಗಾಲಕೆ ,ಚಳಿ ವಿಪರೀತ
ಗಡಗಡ ನಡುಗುವ ಗಮ್ಮತ್ತ
ಕಂಬಳಿ ಹೊದ್ದು ಮಲಗಿದರೆ
ಮುಂಜಾನೆ ಏಳಲು ಮನಸ್ಸಿಲ್ಲ, ಖರೆ.!!

೩) ಸಾಧನೆ

ಸಾಧನೆ ಮಾಡಿದ ಮಹಾಪುರುಷರ
ಕತೆಯನು ಗುರುಗಳು ಹೇಳುವರು
ಹುರುಪನು ನೀಡುತ ಮಕ್ಕಳ ಮನದಲಿ
ಕನಸುಗಳ ತುಂಬುವರು

ಭವಿಷ್ಯದ ಕುಡಿಗಳು ನಾವೆಲ್ಲರು
ಜೊತೆಯಾಗಿ ಸಾಗೋಣ
ವಿದ್ಯೆ ಕಲಿತು ಯಶವ ಸಾಧಿಸಿ
ಹೆತ್ತವರಿಗೆ ಕೀರ್ತಿಯ ತರೋಣ.

Source Images : Kannada kids rhymes. 


೪) ಸಮಾನತೆ
ಇರಬೇಕು ಎಲ್ಲ ಕಡೆ ಸಮಾನತೆಯ ಗಂಧ
ಹರಡಲಿ ಸ್ನೇಹ ಸೌಹಾರ್ದತೆ ಸೌಗಂಧ
ಜಾತಿಮತದ ಕೊಳೆಯ ತೊಳೆದು ಹಾಕೋಣ
ಮಾನವೀಯತೆಯ ಹೂವ ಕೈಗೆ ನೀಡೋಣ

ಎಲ್ಲರೂ ಒಂದೆ ಇಲ್ಲಿ ಭಾರತಾಂಬೆಯ ಮಕ್ಕಳು
ಎಲ್ಲರ ದೇಹದಲ್ಲಿ ಹರಿವುದು ಕೆಂಪು ನೆತ್ತರು
ಹೊಡೆದಾಟ ಬಡಿದಾಟ ಬೇಡವೇ ಬೇಡ
ಶಾನಮತಿಯ ಪಾರಿವಾಳ ಹಾರಲಿ ಈಗ

೫) ಸಂತೆಗೆ ಹೋಗೋಣ
ಬಾ ಅಣ್ಣ ನಾನು ನೀನು ಸಂತೆಗೆ ಹೋಗೋಣ
ಬಣ್ಣ ಬಣ್ಣದ ರಿಬ್ಬನ್ ಬಲೂನನು ನನಗೆ ಕೊಡಿಸಣ್ಣ
ಕಬ್ಬಿನ ಹಾಲನು ಕುಡಿದು ನಾವು ಗಟ್ಟಿಯಾಗೋಣ
ದೊಡ್ಡ ಚಕ್ರದ ತೊಟ್ಟಿಲಲಿ ಕುಳಿತು ಸುತ್ತು ಸುತ್ತೋಣ!!

ಅಮ್ಮನಿಗಾಗಿ ಗಾಜಿನ ಬಳೆಗಳು
ಅಪ್ಪನಿಗಾಗಿ ಕೂಲಿಂಗ್ಲಾಸು
ತಮ್ಮನಿಗಾಗಿ ಆಟಿಕೆ ತೆಗೆದು ಮನೆಗೆ ಸಾಗೋಣ..
ಬಾ ಅಣ್ಣ ನಾನು ನೀನು ಸಂತೆಗೆ ಹೋಗೋಣ!!

- ಸಿಂಧು ಭಾರ್ಗವ, ಬೆಂಗಳೂರು
ಮಕ್ಕಳ ಸಾಹಿತಿ.

Kids stories ಮಕ್ಕಳ ಕತೆ : ರೆಕ್ಕೆಬಿಚ್ಚಿ ಹಾರುವ ಹಕ್ಕಿಗಳು

 

ಮಕ್ಕಳ ಕತೆ : ರೆಕ್ಕೆಬಿಚ್ಚಿ ಹಾರುವ ಹಕ್ಕಿಗಳು



Source image Kannada Kids Moral Stories.


ರಾಮಪುರ ಎಂಬ ಸುಂದರ ಗ್ರಾಮವು ಹಸಿರುಹೊದ್ದ ಕಾನವಾಗಿತ್ತು. ಅಲ್ಲಿನ ಪ್ರತಿಯೊಬ್ಬರು ಕೃಷಿ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಮಹದಾಸೆ ಎಲ್ಲ ಹೆತ್ತವರ ಮನದಲ್ಲಿತ್ತು. ಅದೊಂದು ರಸ್ತೆಯೂ ಇಲ್ಲದ ಬಸ್ಸು ಬಾರದ ಕುಗ್ರಾಮವಾಗಿತ್ತು. ಹೀಗಿದ್ದರು ಸಣ್ಣದೊಂದು ಶಾಲೆ ತಲೆಎತ್ತಿ ನಿಂತಾಗ ಪ್ರತಿಮನೆಯಿಂದ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ರಾಮಣ್ಣನ ಮಕ್ಕಳು ಪುಷ್ಪ ಮತ್ತು ಪ್ರಸಾದ್ ಅಣ್ಣ ತಂಗಿಯರು ಕೂಡ ಬಹಳ ಉತ್ಸಾಹದಿಂದ ಶಾಲೆಗೆ ಹೋಗುತ್ತಿದ್ದರು. ಏಳನೇ ತರಗತಿ ಮುಗಿಸಿ ಹೈಸ್ಕೂಲ್ ಗೆ ಹೋಗುವ ಸಮಯ ಬಂದಿತು. ಕಾಡು ಮಾರ್ಗದಲ್ಲಿ  ಹೋಗುವುದು ಭಯವಾಗುತ್ತಿತ್ತು. ಹಾಗಾಗಿ ಹೆಣ್ಮಕ್ಕಳಿಗೆ ಮನೆಯವರು ಕಳುಹಿಸುತ್ತಿರಲಿಲ್ಲ. ಹುಡುಗರು ತಮ್ಮ ಸೈಕಲ್ ಏರಿ ಹೈಸ್ಕೂಲ್ ಮುಗಿಸಿದರು. ಇದರಿಂದ ಪುಷ್ಪಳಿಗೆ ಬಹಳ ಬೇಸರವಾಯಿತು‌. ತನ್ನ ಓದುವ ಕನಸು ಕಮರಿಹೋಯಿತು.

ಹೀಗಿದ್ದಾಗ ತಂದೆಗೆ ಒತ್ತಾಯ ಮಾಡಿ ಶಾಲೆಗೆ ಕಳುಹಿಸಲು ಹೇಳಿದಳು. ಮೊದಮೊದಲು ಒಪ್ಪದ ತಂದೆ ನಂತರದಲ್ಲಿ ಒಪ್ಪಿಗೆ ಸೂಚಿಸಿದರು. ಆ ಹಳ್ಳಿಯಲ್ಲಿ ಅವಳೊಬ್ಬಳೇ ಹೈಸ್ಕೂಲು ಮೆಟ್ಟಿಲು ಹತ್ತಿದವಳು ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಇದು ಅವಳಲ್ಲಿ ಜಂಭೂಡಿಸದಲು ಎಡೆಮಾಡಿಕೊಟ್ಟಿತು. ತಂದೆಯ ಬಳಿ ಯಾವಾಗಲೂ ಹಣ ಕೇಳುವುದು. ಕಂಡದ್ದನ್ನೆಲ್ಲ ಖರೀದಿಸಿ ದುಂದುವೆಚ್ಚ ಮಾಡುವುದು. ತಂದೆ ಏಕೆ ಇಷ್ಟು ಹಣ? ಎಂದು ಕೇಳಿದರೆ "ಶಾಲೆಯಲ್ಲಿ ಹೇಳಿದ್ದಾರೆ... " ಎಂದು ಸುಳ್ಳು ಹೇಳುವುದು.

ಹೀಗೆ ಒಂಭತ್ತನೇ ತರಗತಿಗೆ ಬರುವಷ್ಟರಲ್ಲಿ ಸ್ನೇಹಿತರ ದೊಡ್ಡ ಗುಂಪೇ ಅವಳೊಂದಿಗೆ ಜೊತೆಯಾಗಿತ್ತು. ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಪರೀಕ್ಷೆಯಲ್ಲಿ ಅನುತ್ತೀರ್ಣಳಾದಳು. ಸುದ್ದಿ ಕೇಳಿದ ತಂದೆಗೆ ಎಲ್ಲಿಲ್ಲದ ಆಘಾತವಾಯಿತು. ಜೊತೆಗೆ ಅಂಕಪಟ್ಟಿಗೆ ಸಹಿ ಹಾಕಲು ಶಾಲೆಗೆ ಬರಲು ಹೇಳಿದ್ದರು. ಒಮ್ಮೆಯೂ ಶಾಲೆ ಕಡೆಗೆ ಮುಖ ಮಾಡದ ರಾಮಣ್ಣನಿಗೆ ಅವಮಾನವಾಯಿತು. ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಮಾತು ಕೇಳಿ ತಮ್ಮ ಕಿವಿಯನ್ನೇ ನಂಬಲು ಅಸಾಧ್ಯವಾಯಿತು. "ನಿಮ್ಮ ಮಗಳು ಓದಿನಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ತರಗತಿಗೂ ಸರಿಯಾಗಿ ಬರುತ್ತಿಲ್ಲ. ಬದಲಾಗಿ ಹುಡುಗರ ಜೊತೆಗೆ ಅಲ್ಲಲ್ಲಿ ತಿರುಗಾಡುತ್ತಿರುವುದನ್ನುಉಳಿದ ವಿದ್ಯಾರ್ಥಿಗಳು, ಶಿಕ್ಷಕರು ಸಹ ನೋಡಿದ್ದಾರೆ. ಅವಳು ಹಾದಿ ತಪ್ಪುವ ಮೊದಲು ಬೈದು ಬುದ್ದಿಹೇಳಿ. ಈ ವಿಷಯವನ್ನು ತಿಳಿಸಲೆಂದೇ ನಿಮ್ಮನ್ನು ವೈಯಕ್ತಿಕವಾಗಿ ಕರೆಯಬೇಕಾಯಿತು ಎಂದರು.

ತಂದೆಗೆ ತಲೆಬಿಸಿಯಾಯಿತು‌. ಸಂಜೆ ಮಗಳು ಮನೆಗೆ ಬರುವುದನ್ನೇ ಕಾಯುತ್ತ ಕುಳಿತಿದ್ದರು. ಮಗನ ಜೊತೆಗೆ ಬಾರದೇ ಇರುವುದನ್ನು ನೋಡಿ ಕೋಪ ನೆತ್ತಿಗೇರಿತು. ತನ್ನ ಮಡದಿಯನ್ನು ಕರೆದು ಮಗ ಬರುವ ತನಕ ಕಾದು ಎಲ್ಲರೂ ಜೊತೆಗಿದ್ದ ಸಮಯ ನೋಡಿ ಮಗಳಿಗೆ ಚೆನ್ನಾಗಿ ಬೈದು ಬುದ್ದಿಮಾತನ್ನು ಹೇಳಿದರು. ಅವರು ಕೇಳಿದ ಪ್ರಶ್ನೆಗಳಿಗೆ ಅಣ್ಣನು ಕೂಡ ಹೌದು, ನಾನೆಷ್ಟು ಹೇಳಿದರು ನನ್ನ ಮಾತನ್ನು ಕೇಳುತ್ತಿಲ್ಲ. ಎಲ್ಲ ಹುಡುಗರ ಎದುರೇ ಅವಮಾನ ಮಾಡುತ್ತಾಳೆ ಎಂದನು.

ಮಗಳಿಗೆ ನೀಡಿದ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖಚಿತವಾಯಿತು. ನೀನಿನ್ನು ಶಾಲೆಗೆ ಹೋಗುವುದು ಬೇಡ ಎಂದು ಗದರಿಸಿದರು. ಒಂಭತ್ತನೇ ತರಗತಿಯು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಪುಷ್ಪಾಳಿಗೆ ಎಲ್ಲಿಲ್ಲದ ದುಃಖವಾಯಿತು. ಒಮ್ಮೆ ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ್ದಾಗ ತಂದೆಯ ಕೋಣೆಗೆ ಹೋಗಿ ಕಾಲಿಗೆ ಬಿದ್ದಳು. " ಇಲ್ಲ ಅಪ್ಪ ನಾನಿನ್ನು ಈ ತರಹ ಮಾಡುವುದಿಲ್ಲ. ದಯಮಾಡಿ ಓದಲು ಕಳುಹಿಸಿ. ನಾನು ಅಣ್ಣನಂತೆ ಚೆನ್ನಾಗಿ ಓದಿ ಕೆಲಸಕ್ಕೆ ಸೇರುವೆ. ಕಾಲೇಜು ಡಿಗ್ರಿ ಓದುವ ಕನಸಿದೆ. ನನ್ನ ತಪ್ಪಿನ ಅರಿವಾಗಿದೆ..." ಎಂದು ಕೇಳಿಕೊಂಡಳು.

Source image. Kannada kids Stories. 


ಮರುದಿನ ಮಗಳನ್ನು ಕರೆದುಕೊಂಡು ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯರ ಬಳಿ ಮಾತನಾಡಿ ಮತ್ತೆ ಶಾಲೆಗೆ ಬರಲು ಅನುಮತಿ ದೊರಕಿತು. ಪರೀಕ್ಷೆಯಲ್ಲಿ ಪಾಸಾದಳು. ಮುಂದೆಂದೂ ಈ ರೀತಿಯ ತಪ್ಪನ್ನು ಮಾಡಲು ಹೋಗಲಿಲ್ಲ.

ಓದುವ ವಯಸ್ಸಿನಲ್ಲಿ ಅನ್ಯ ವಿಷಯದ ಬಗ್ಗೆ ಆಸಕ್ತಿ ಆಕರ್ಷಣೆ ಮೂಡುವುದು ಸಹಜ. ಏನೂ ಅರಿಯದ, ಮುಂದಾಗುವ ಅಪಾಯವನ್ನೇ ಊಹಿಸದ ಹರೆಯದ ಮನಸ್ಸು ಮನೆಯವರೇ ದೂರದವರಂತೆ ಭಾವಿಸಿ ಹೊರಗಿನವರನ್ನು ನೆಚ್ಚಿಕೊಳ್ಳುವುದು. ಹೆತ್ತವರು ಸರಿಯಾದ ಮಾರ್ಗದರ್ಶನ ನೀಡಿ ಸರಿದಾರಿಗೆ ತರುವುದು ದೊಡ್ಡ ಜವಾಬ್ದಾರಿಯಾಗಿದೆ.

- ಸಿಂಧು ಭಾರ್ಗವ ಬೆಂಗಳೂರು

Tuesday, 7 July 2020

ಮಕ್ಕಳ ಕತೆ : ತಿರುಗಿ ಬಂದ ಅದೃಷ್ಟ


ಮಕ್ಕಳ ಕಥೆ:  ತಿರುಗಿ ಬಂದ ಅದೃಷ್ಟ
ಸೀತಮ್ಮ ಸುಂದರ್ಹಳ್ಳಿ ಎನ್ನುವ ಪುಟ್ಟ ಹಳ್ಳಿಯಲ್ಲಿ ತನ್ನ ಗಂಡನ ಜೊತೆ ವಾಸಿಸುತ್ತಿದ್ದಳು. ಬಡತನದ ಬದುಕಿಗೆ ಮಡಿಕೆ ಮಾಡುವುದೇ ಕಾಯಕವಾಗಿತ್ತು. ಅನುದಿನವೂ ಗಂಡ ರಾಮಯ್ಯನ ಜೊತೆ ಮಡಿಕೆ ತಯಾರಿಸಿ ಸಂತೆಗೆ ಹೋಗಿ ಮಾರಿ ಬರುತ್ತಿದ್ದರು. ವರುಷಗಳು ಉರುಳಿದರೂ  ಅವರಿಗೆ ಲಾಭವೇನೂ ಆಗಲೇ‌ ಇಲ್ಲ. " ಉಂಡು ತಿಂದು ಮಲಗುವುದೇ ಆಯ್ತು. ಈ ಹರಕಲು ಗುಡಿಸಲಿನಲ್ಲಿಯೇ ಎಷ್ಟು ದಿನ ಇರುವುದು? ಇನ್ನು ಹೆಚ್ಚು ಮಡಿಕೆ ತಯಾರಿಸುವ ..." ಎಂದು ರಾಮಯ್ಯನ ಹತ್ತಿರ ಹೇಳಿದಳು. ಆಗ ರಾಮಯ್ಯ ಈಗ ಕಾಲ ಬದಲಾಗಿದೆ. ಮಡಿಕೆ‌ ಕೊಳ್ಳುವವರು ಯಾರೂ ಇಲ್ಲ. ನಮ್ಮ ಮಡಿಕೆಗೆ ಬೆಲೆ ಇಲ್ಲ..." ಎಂದನು.

ಅದೇ ಚಿಂತೆಯಲ್ಲಿ  ಸೀತಮ್ಮ ಮುಂಜಾನೆಯ ತಿಂಡಿಯನ್ನೂ ತಿನ್ನದೇ ಒಂದಷ್ಟು ಮಡಿಕೆಗಳನ್ನು ತಲೆಮೇಲೆ ಇರಿಸಿಕೊಂಡು ಸಂತೆಗೆ ನಡೆದಳು. ಹಾಗೆ ಹಾದಿ ಮಧ್ಯೆ ಮಂಗಗಳ ಹಿಂಡೊಂದು ಮರದಲ್ಲಿ ಆಟವಾಡುತ್ತಿದ್ದವು. ಅದರಲ್ಲಿ ಒಂದು ಕೋತಿ ಏನೋ ಗಂಟನ್ನು ಹಿಡಿದುಕೊಂಡಿತ್ತು. ಇನ್ನೊಂದು ಕೋತಿ ಅದನ್ನು ಎಳೆಯಲು ಪ್ರಯತ್ನಿಸಿತು.  ಹೀಗೆ ಮೇಲಿಂದ ಮೇಲೆ ಜಳಗ‌ ಮಾಡಿಕೊಳ್ಳುವಾಗ ಆ ಗಂಟು ಸೀತಮ್ಮನ ಮಡಿಕೆಯೊಳಗೆ ಕೈತಪ್ಪಿ ಬಿದ್ದು ಬಿಟ್ಟಿತು. ಇದನ್ನು ಅರಿಯದ ಸೀತಮ್ಮ ಮಡಿಕೆಗಳನ್ನು ಮಾರಲು ಸಂತೆಗೆ ಹೋಗಿ ತನ್ನ ಮಾಮೂಲಿ ಜಾಗದಲ್ಲಿ ಕುಳಿತುಕೊಂಡಳು. ಒಂದೊಂದೇ ಮಡಿಕೆಗಳನ್ನು ಸಾಲಾಗಿ ಮೇಲಿಂದ ಮೇಲೆ ಹೊಂದಿಸಲು ಶುರುವಿಟ್ಟಳು. ಅದೇ ಸಮಯದಲ್ಲಿ‌ ಒಂದು ಮಡಿಕೆಯಿಂದ "ಟಣ್-ಟಣಾ" "ಟಣ್-ಟಣಾ..." ಎಂದು ಶಬ್ದ ಬರುವುದು ಕೇಳಿಸಿತು. ಅಚ್ಚರಿಯಿಂದ ಮಡಿಕೆ‌ ನೋಡಿದರೆ ಅದರಲ್ಲಿ ಪುಟ್ಟ ಗಂಟಿತ್ತು. ಬಿಡಿಸಿ ನೋಡಿದಾಗ ಐನೂರರ ಒಂದಷ್ಟು ನೋಟುಗಳ ಕಟ್ಟು ಹಾಗೆಯೇ ಒಂದಷ್ಟು ನಾಣ್ಯಗಳು ಜೊತೆಗೆ ಚಿನ್ನದ ಒಂದು ನಾಣ್ಯ ಕೂಡ ಹೊಳೆಯುತ್ತಿತ್ತು.  ಆದರೆ ಅದು ಹೇಗೆ ಬಂತು? ಯಾರದ್ದು? ಒಂದೂ ಅರಿವಾಗಲಿಲ್ಲ. ಅದರ ಬಗ್ಗೆಯೇ ಯೋಚಿಸ ತೊಡಗಿದಳು. ಒಮ್ಮೆ ಮನಸ್ಸಿಗೆ ದಿಗಿಲಾಗಿ "ಇಲ್ಲಿಂದ ನೇರ ಮನೆಗೆ ಹೋಗುವುದೇ ಸರಿ‌" ಎಂದು ಭಾವಿಸಿದಳು. 
ಮನೆಗೆ ವೇಗವಾಗಿ ಧಾವಿಸಿ ಗಂಡನನ್ನು ಕರೆದಳು. ರಾಮಯ್ಯಗೆ ಮಡಿಕೆ ತಯಾರಿಸಿ ತುಂಬಾ ಆಯಾಸವಾಗಿತ್ತು. ಮಧ್ಯಾಹ್ನದ ಸಮಯ, ಮಲಗಿದ್ದನು. ಸೀತಮ್ಮ ಬೇಗನೆ ಹಿಂತಿರುಗಿ ಬಂದದ್ದು ನೋಡಿ ಅಚ್ಚರಿಯಾಯಿತು. ಏಕೆ ? ಏನಾಯಿತು? ಎಂದು ಕೇಳಿದನು. ಅವಳು ನಡೆದ ಕತೆಯನ್ನೆಲ್ಲ ಹೇಳಿದಳು. ಆಗ ರಾಮಯ್ಯನಿಗೆ ತಲೆಬಿಸಿಯಾಯಿತು. ಸತ್ಯವಂತ, ನಿಷ್ಠಾವಂತ ರಾಮಯ್ಯನಿಗೆ ಆ ಹಣವು ಪಾಷಾಣದಂತೆ ಕಂಡಿತು. "ಒಂದು ಕೆಲಸ ಮಾಡುವ.. ಯಾರಾದರೂ ಈ ಹಣದ ಬಗ್ಗೆ ಮಾತನಾಡುತ್ತಾ ಇದ್ದಾರಾ? ಯಾರ ಹಣದ ಕೈಚೀಲ ಕಳೆದುಹೋಗಿದೆಯೋ ಎಂದು ಊರೆಲ್ಲ ಕೇಳಿ ಬರುತ್ತೇನೆ. ವಾರಸುದಾರರಿಗೆ ಮರಳಿಸೋಣ" ಎಂದನು.
ಸೀತಮ್ಮನು ಒಪ್ಪಿದಳು. ಹೀಗೆ ಮನೆಮನೆಗೂ ಕೇಳುತ್ತ ಹೊರಟನು. ಯಾರೂ ತನ್ನದಲ್ಲ ಎಂದರು. ರಾಮಯ್ಯ ವಾಪಾಸಾದನು. ಮರುದಿನ ಪತ್ರಿಕೆಯಲ್ಲಿ ಕಳೆದು ಕೊಂಡವರ ಬಗ್ಗೆ ಏನಾದರೂ ಮಾಹಿತಿ ಬಂದಿದೆಯಾ...? ಎಂದು ಕಣ್ಣಾಡಿಸಿದನು. ಅಲ್ಲಿಯೂ ಏನೂ ಮಾಹಿತಿ ಇರಲಿಲ್ಲ. ಏನು ಮಾಡುವುದು ಈ ಹಣವನ್ನು ಎಂದು ಸುಮ್ಮನೆ ಕುಳಿತನು. ಆಗ ಸೀತಮ್ಮ "ನಾವು ನಮ್ಮ ಪ್ರಯತ್ನವೆಲ್ಲ ಮಾಡಿದೆವು, ನಮ್ಮ‌ಹಣ ಕಳೆದುಹೋಗಿದೆ ಎಂದು ಯಾರೂ ಕೇಳಿಕೊಂಡು ಬರಲಿಲ್ಲ. ಅದು ಯಾರದ್ದು ಎಂದೂ ತಿಳಿದಿಲ್ಲ, ನಾವೇ ಉಪಯೋಗಿಸುವ ಎಂದಳು.  ರಾಮಯ್ಯನಿಗೆ ಸರಿ ಕಾಣಿಸಲಿಲ್ಲ. ಆ ಸಣ್ಣ ಗಂಟನ್ನು ಹಿಡಿದುಕೊಂಡು ಸಂತೆ ಹಾದಿಯಲ್ಲಿ  ಸಾಗಿ ಅದೇ ಮಂಗಗಳ ಹಿಂಡಿರುವ ಮರದ ಕೊಂಬೆ ಮೇಲೆ ಇರಿಸಿದನು. ಒಂದು ಕೋತಿಯು ಬಂದು ಎತ್ತಿಕೊಂಡು ಹೋಯಿತು. ಮತ್ತೆ ಕಿತ್ತಾಡಲು ಶುರುಮಾಡಿದವು. ರಾಮಯ್ಯನಿಗೆ ನೋಡಿ ಬೇಸರವಾಯಿತು. ಹಣವು ಮಹಾಲಕ್ಷ್ಮಿ ಇದ್ದಂತೆ. ಇವಕ್ಕೆ ಏನು ಗೊತ್ತಿದೆ ಅದರ ಮಹತ್ವ.. ಈ ಮಂಗಗಳ ಕೈಗೆ ಸಿಕ್ಕರೆ ಹರಿದು ಚಿಂದಿ ಮಾಡಿಬಿಟ್ಟಾವು ಎಂದೆನಿಸಿ ಮತ್ತೆ ಆ ಗಂಟನ್ನು ಮನೆಗೆ ವಾಪಾಸು ತೆಗೆದುಕೊಂಡು ಹೋದನು. ಕಷ್ಟ ಎಂದಾಗೆಲ್ಲ ಆ ಲಕ್ಷ್ಮಿ ಫೋಟೋಗೆ ನಮಸ್ಕರಿಸಿ ಆ ಹಣವನ್ನು ತೆಗೆದುಕೊಳ್ಳುತ್ತಿದ್ದರು.
ನೀತಿ : ಕೆಲವು ನಮಗಾಗಿಯೇ ಅದೃಷ್ಟ ಬಂದಾಗ ಬೇಡ ಎನ್ನಬಾರದು.


ಕಥೆಗಾರ್ತಿ : ಸಿಂಧು ಭಾರ್ಗವ್ | ಬೆಂಗಳೂರು-೨೧


Thursday, 14 May 2020

ಶಿಶುಗೀತೆ ಎಂದರೆ ಏನು? ಹೇಗೆ ಬರೆಯುವುದು?

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು
ಮಕ್ಕಳ ಸಾಹಿತ್ಯಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಲೇಖನ.

*ಸ್ನೇಹಿತರೇ,*
*ಶಿಶುಗೀತೆ ಎಂದರೆ* ಐದು ವರುಷದೊಳಗಿನ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ, ಅವರಿಗೆ ಹಾಡಿಸಿ ಕುಣಿಸುವ ರೀತಿಯಲ್ಲಿ ಬರೆಯುವುದು. (ನಲಿ-ಕಲಿ ಪದ್ದತಿ)

*ಶಿಶುಗೀತೆಯ ಮೂಲ ಉದ್ದೇಶ :*
ಆ ಮಗು ಒಂದು ವಸ್ತುವಿನ ಆಕಾರ, ಬಣ್ಣ, ಶಬ್ದ ಎಲ್ಲವನ್ನೂ ಅರಿತುಕೊಳ್ಳಲು, ಗುರುತಿಸಲು  ಕಲಿಸುವ ವಿಧಾನ.

*ಶಿಶುಗೀತೆಯ ಸಾಲುಗಳು* : ಆರರಿಂದ ಎಂಟುಗಳು ಸಾಲು, ಅಥವಾ ಹತ್ತು‌ ಸಾಲುಗಳೂ ಇರಬಹುದು. ಮಕ್ಕಳ ಪದ್ಯಗಳು ೨೦-೨೮ ಸಾಲುಗಳು ಇರಬಹುದು, ಕಥನ ಕವನ ಅದಕ್ಕಿಂತ ಹೆಚ್ಚಾಗಿ ಇರಲೂ ಬಹುದು.

*ಉದಾ:*
ಶಿಶುಗೀತೆ : ಬುಗುರಿ
ಬಣ್ಣದ ಬುಗುರಿ, ದುಂಡನೆ ಬುಗುರಿ
ನನ್ನಯ ನೆಚ್ಚಿನ ಆಟದ ಬುಗುರಿ
ದಾರವ ಸುತ್ತಿ ನೆಲಕ್ಕೆ ಬಡಿದರೆ
ಗಿರ ಗಿರ ತಿರುಗುವ ಉಂಡೆ ಬುಗುರಿ
ಬಣ್ಣ ಬಣ್ಣದ ಗೆರೆಗಳ ಎಳೆದು
ಚಂದ ಗಾಣಿಸೋ ನನ್ನಯ ಬುಗುರಿ
ಅಣ್ಣನ ಜೊತೆಯಲಿ ಪಂಥಕೆ ಇಳಿದರೆ
ನನ್ನನೆ ಗೆಲ್ಲಿಸೋ ಮುದ್ದಿನ ಬುಗುರಿ

ರಚನೆ:- ಸಿಂಧು ಭಾರ್ಗವ್ ಬೆಂಗಳೂರು

ಇಲ್ಲಿ ನೀವು ಗಮನಿಸುವಂತೆ:
➡ ಬುಗುರಿಯು ದುಂಡಗಾಗಿದೆ(ಆಕಾರ, size)
➡ ಗಿರಗಿರ ತಿರುಗುವುದು ( ಶಬ್ದ sound)
(( ಇಲ್ಲಿ ಜೋಡಿಪದಗಳ ಬಳಕೆ ಹೆಚ್ಚಾಗಿ ಬಳಸಬೇಕು.
ಅಂದರೆ ಗಿರ-ಗಿರ, ಪಟ-ಪಟ, ಗಬ-ಗಬ, ಝಣ-ಝಣ, ಟನ್-ಟನ್ ಇತ್ಯಾದಿ.))
➡ ಅನೇಕ ಬಣ್ಣಗಳಿಂದ ಕೂಡಿರುತ್ತದೆ.
➡ ದಾರವನ್ನು ಸುತ್ತಿ ಎಸೆಯುತ್ತಾರೆ

ಹೀಗೆ ಎಲ್ಲ ವಿಷಯವಸ್ತುವನ್ನು ಒಳಗೊಂಡ ಹಾಡು ಹಾಡಿದಾಗ ಆ ಮಗುವಿಗೆ ನೆನಪಿನಲ್ಲಿ ಉಳಿಯುವುದು. ಅಲ್ಲದೇ ಮುಂದೆ ಎಲ್ಲಿ ಬುಗುರಿಯನ್ನು ನೋಡಿದರು ಅದು ಗುರುತಿಸಲು ಶಕ್ತವಾಗುತ್ತದೆ. 🥰🥰
ಅಲ್ಲದೇ ಶಿಶುಗೀತೆಯ ಮೂಲಕ ಅಂಕೆಗಳನ್ನು, ಅಕ್ಷರಗಳನ್ನು, ಹಣ್ಣುಗಳ ಬಗೆ, ಆಕಾರಗಳನ್ನು ನಾವು ಕಲಿಸಿಕೊಡುತ್ತೇವೆ.
*ಹಾಗೆಯೇ ಮಗುವಿನ‌ ಮನಸ್ಸಿನಾಳಕ್ಕೆ ಇಳಿದು ಬರೆದರೆ ಮಾತ್ರ ಅದು ಶಿಶುಗೀತೆಯಾಗುತ್ತದೆ.*  ಹೆಚ್ಚಿನವರು ಜೀವನ ಸಂದೇಶವನ್ನು ಬರೆಯುತ್ತಾರೆ.ಅದು ಮಗುವಿಗೆ ಹೇಗೆ ಅರ್ಥವಾಗುತ್ತದೆ 😊 ಹೇಳಿ???
ಕೆಲವರು ಹನಿಗವನವನ್ನು ಬರೆಯುತ್ತಾರೆ. ಅದು ಶುದ್ಧತಪ್ಪು❌❌✍️ ಬೇಡವೇ ಬೇಡ. ಹಾಗೆ ಬರೆಯಬೇಡಿ.

*ಇನ್ನೊಂದು ವಿಷಯ:* ಮಕ್ಕಳ ಹಾಡು ಬೇರೆಯಾಗಿದೆ. ಅದಕ್ಕೆ ಶಿಶುಗೀತೆ ಎಂಬ ತಲೆಬರಹ ಕೊಡಬೇಡಿ. *ಕೆಲವು ವಾಟ್ಸ್ ಆಪ್,ಮುಖಪುಸ್ತಕದ ಗ್ರೂಪಿನಲ್ಲಿ ನೋಡಿದ್ದೇನೆ. ಮಕ್ಕಳ ಸಾಹಿತ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಸ್ಪರ್ಧೆ ನಡೆಸುತ್ತಾರೆ. ೨೦-೨೪ ಸಾಲುಗಳಲ್ಲಿ ಶಿಶುಗೀತೆ ಬರೆಯಿರಿ ಎಂದು ಹೇಳುತ್ತಾರೆ* *ಅದು ತಪ್ಪು❌✍️*
*~ಶಿಶುಗೀತೆ~ ಅಲ್ಲ ❌.  ಮಕ್ಕಳ ಹಾಡು ಅಥವಾ ಮಕ್ಕಳ ಪದ್ಯ ಬರೆಯಿರಿ✔️ ಎಂದಾಗಬೇಕು.  ಪದ ಪ್ರಯೋಗದ ಕಡೆಗೆ ಗಮನ ಹರಿಸಬೇಕು.*
*ಮೂರು ನಾಲ್ಕು ವರ್ಷದ ಮಗುವಿಗೆ  ೨೦-೨೪ ಸಾಲುಗಳ ಪದ್ಯ. ಹೇಗೆ ಅರ್ಥವಾಗುತ್ತದೆ.*?? ಶಿಶು ಎಂದರೆ ಸಣ್ಣ ಮಗು ಎಂಬ ಅರ್ಥವಿರುವುದು ತಾನೆ. ಅಂಗನವಾಡಿ ( ಶಿಶುಕೇಂದ್ರ) ಹೌದಲ್ಲವೇ??
ದಯಮಾಡಿ ಬದಲಾಯಿಸಿಕೊಳ್ಳಿ. ಎಲ್ಲರೂ ಮಾಡುವ ತಪ್ಪನ್ನೇ ನೀವೂ ಮಾಡಬೇಡಿ.

- ಭಾಗ ೦೨ -
*ಕೆಲವರು ಶಿಶುಗೀತೆ ಎಂದಾಗ ಹನಿಗವನ ಬರೆಯುತ್ತೀರಿ.*
"ಆರರಿಂದ ಎಂಟು ಸಾಲುಗಳಲ್ಲಿ ಬರೆಯಿರಿ"....ಎಂದಾಗ
ಅದನ್ನು ಹನಿಗವನದ ತರಹವೇ ಎಂದು ಏಕೆ ಯೋಚಿಸುತ್ತೀರಿ?
ಅಲ್ಲದೇ ಹನಿಗವನ ಎಂದು ಹೇಗೆ ಪರಿಗಣಿಸುತ್ತೀರಿ?
ಮೊಂಡುವಾದ ಬೇರೆ ಮಾಡುವುದು..
*ಶಿಶುಗೀತೆ ಎಂದರೆ ಏನು?? :* ನರ್ಸರಿ ರೈಮ್ಸ್. ಅಂಗನವಾಡಿ ಮಕ್ಕಳಿಗೆ ಹೇಳಿಕೊಡುವ ಹಾಡು.‌ Nursery Rhymes. ಪುಟಾಣಿ ಮಕ್ಕಳಿಗೆ ಹೇಳಿಕೊಡುವ ಹಾಡು. ಅವರ ಮುಗ್ಧತೆ, ತುಂಟತನ ಹಾಡಿನಲ್ಲಿ ಮೇಳೈಸಬೇಕು. ಪದಗಳ ಬಳಕೆ ಕೂಡ ಅಷ್ಟೇ ಮುಗ್ಧವಾಗಿರಬೇಕು.‌ಒಂದು ಸಾಲನ್ನು ಪದೇ‌ಪದೇ ಹೇಳಿಸಿ ನೃತ್ಯ ಮಾಡಿಸುವಂತಿರಬೇಕು.*

*ಪ್ರಾರ್ಥಮಿಕ , ಪ್ರೌಢ , ಕಾಲೇಜು ಮಕ್ಕಳು ಎಂದು ಮೂರು ವಿಭಾಗವಿದೆ ತಾನೆ. ಅದರಲ್ಲಿ ಮಕ್ಕಳ‌ ಪದ್ಯವೇ ಬೇರೆ. ಅದು ಐದಾರು ಪಾರಾ ಇಲ್ಲ‌ ಜಾಸ್ತಿಯೂ ಇರಬಹುದು. ಅದರಲ್ಲಿ ಆಯಾಯ ಮಕ್ಕಳ ವಯೋಮಿತಿಗೆ ಹೊಂದಿ ಕಥನ ಕವನವನ್ನು ಬರೆಯಬಹುದು. ಐತಿಹಾಸಿಕ, ಪುರಾಣದ ಕಥೆಯನ್ನು ಅಥವಾ ನೀತಿಕಥೆಯನ್ನು ಲಯಬದ್ಧವಾಗಿ ಕವನ ರೂಪದಲ್ಲಿ ಬರೆಯುವುದೇ ಕಥನ ಕವನವಾಗಿರುತ್ತದೆ.*
ಗಮನಿಸಿ. ‌ಬರೆಯಲು ಅಭ್ಯಾಸ ಮಾಡಿರಿ.
ಶುಭವಾಗಲಿ💐

ಕೆಲವು ಉದಾಹರಣೆಗಾಗಿ ಶಿಶುಗೀತೆ ಹಾಗು ಮಕ್ಕಳ‌ ಪದ್ಯಗಳು.

)೧(

ಶಿಶುಗೀತೆ : ಅಂಕೆಗಳು

ಒಂದು ಎರಡು
ಬೇಸಿಗೆ ಬರಡು

ಮೂರು ನಾಲ್ಕು
ಮಳೆ ಬರಬೇಕು

ಐದು ಆರು
ಒಣಗಿದೆ ಬೇರು

ಏಳು ಎಂಟು
ರುಚಿಸದ ದಂಟು

ಒಂಭತ್ತು ಹತ್ತು
ಊಟಕೆ ಒಪ್ಪೊತ್ತು

ಒಂದರಿಂದ ಹತ್ತು ಹೀಗಿತ್ತು.
ಬೇಸಿಗೆ ಬಿಸಿಲು‌ ಜೋರಿತ್ತು.

- ಸಿಂಧು ಭಾರ್ಗವ್ ಬೆಂಗಳೂರು
✍️📚📚✍️🧸📚✍️📚🧸🧸📚✍️

೨)
ಶಿಶುಗೀತೆ : ಬುಗುರಿ

ಬಣ್ಣದ ಬುಗುರಿ, ದುಂಡನೆ ಬುಗುರಿ
ನನ್ನಯ ನೆಚ್ಚಿನ ಆಟದ ಬುಗುರಿ
ದಾರವ ಸುತ್ತಿ ನೆಲಕ್ಕೆ ಬಡಿದರೆ
ಗಿರಕಿ ಹೊಡೆಯುವ ಉಂಡೆ ಬುಗುರಿ
ಬಣ್ಣ ಬಣ್ಣದ ಗೆರೆಗಳ ಎಳೆದು
ಚಂದ ಗಾಣಿಸೋ ನನ್ನಯ ಬುಗುರಿ
ಅಣ್ಣನ ಜೊತೆಯಲಿ ಪಂಥಗೆ ಇಳಿದರೆ
ನನ್ನನೆ ಗೆಲ್ಲಿಸೋ ಮುದ್ದಿನ ಬುಗುರಿ

ರಚನೆ:- ಸಿಂಧು ಭಾರ್ಗವ್ |ಬೆಂಗಳೂರು


೩)

ಶಿಶುವಿಗೆ ಲಾಲಿಹಾಡು : ಮುದ್ದು ಮಗುವೆ

ಮಲಗು ಮಲಗೆನ್ನ ಮುದ್ದು ಮಗುವೇ
ಚಂದಿರನ ತಂದು ನಿನ್ನ ಜೋಕಾಲಿಯಲ್ಲಿಡುವೆ
ಚುಕ್ಕಿಗಳ ಪೋಣಿಸಿ ಸುತ್ತ ನಿಲ್ಲಿಸುವೆ
ಜೋಗುಳವ ಹಾಡಲು ಕೋಗಿಲೆಯ ಕೋರುವೆ//ಮಲಗು//

ಕನಸಿನ ಊರಿಗೆ ಕಥೆಯೊಂದಿಗೆ ಕರೆದೊಯ್ವೆ
ಬೆಚ್ಚಗಿನ ಪ್ರೀತಿಯ ಹೊದಿಕೆ ಹೊದೆಸುವೆ
ನಿದಿರೆಯಲು ನಿನ್ನ ನಗುಮೊಗವ ನೋಡುವೆ//ಮಲಗು//

ರಚನೆ:- ಸಿಂಧು ಭಾರ್ಗವ್ ಬೆಂಗಳೂರು

೪)

ಶಿಶುಗೀತೆ ಶೀರ್ಷಿಕೆ : ಚಂದಮಾಮ
🤰🤱🤰🤱🤰🤱🤰🤱
ಚಂದಮಾಮ ಓಡಿ ಬಾ
ಗುಂಡುಮಾಮ ಓಡಿ ಬಾ
ನನ್ನ ಜೊತೆಗೆ ಆಡಲು ಬಾ
ನನ್ನ ಜೊತೆಗೆ ನಲಿಯಲು ಬಾ
ಮಿಠಾಯಿ ಕೊಡುವೆ ನಾ ನಿನಗೆ
ಗೊಂಬೆಯ ಕೊಡುವೆ ನಾ ನಿನಗೆ
ಬೆಣ್ಣೆಯಂತೆ ಹೊಳೆಯುವೆ ನೀ
ಹಣ್ಣೆನಂತೆ ಕಾಣುವೆ ನೀ// ಚಂದಮಾಮ‌//

ರಚನೆ:- ಸಿಂಧು ಭಾರ್ಗವ್ ಬೆಂಗಳೂರು


೫))
ಶಿಶುವಿಗೆ ಲಾಲಿಹಾಡು : ಜೋಗುಳ

ಮಲಗು ಮಗುವೆ ನನ್ನ ಮುದ್ದು ಮಗುವೇ
ಜೋಗುಳವ ಹಾಡುತ ನಾ ನಿನ್ನ ತೂಗುವೆ
ಜೋ ..ಜೋ.. ಜೋ...
ಕನಸಿನ‌ ಲೋಕಕೆ  ನೀ ಕರೆತರುವೆ
ನಾ ನಿನ್ನ ಜೊತೆಗೂಡಿ ನಲಿಯಲು ಬರುವೆ
ಜೋ ..ಜೋ ..ಜೋ...
ಗುಮ್ಮನು ಬಂದ ಎಂದು ನೀ ಹಟ ಹಿಡಿಯುವೆ
ಬಿಗಿದಪ್ಪಿ ಸಂತೈಸಿ ನಾ ನಿನ್ನ ಜೊತೆಗಿರುವೆ
ಜೋ ..ಜೋ ..ಜೋ...

ರಚನೆ:- ಸಿಂಧು ಭಾರ್ಗವ್ ಬೆಂಗಳೂರು


೬))
 ಶಿಶುಗೀತೆ: ಪುಟ್ಟ ಪಾಪು

ನಮ್ಮ ಮನೆಯ ಪುಟ್ಟ ಪಾಪು
ಆಟಪಾಠದಲ್ಲಿ ಅವನೆ ಮೊದಲು
ಅಣ್ಣನ ಜೊತೆ ಜಗಳ ಮಾಡುವ
ಅಪ್ಪನ ಕೈಲಿ‌ ಒದೆಯ ತಿನ್ನುವ
ಅವನ ಮಾತು ಅರಳಿನಂತೆ
ನಗುವು ಬಿರಿದ ಸುಮಗಳಂತೆ
ನೋವ ಮರೆಸಲೆಂದು ಬಂದ
ನಮ್ಮ‌ ಬಾಳಿಗೆ ಬೆಳಕ ತಂದ

ರಚನೆ:- ಸಿಂಧು ಭಾರ್ಗವ್ ಬೆಂಗಳೂರು

೭))

ಶಿಶುಗೀತೆ: ಆನೆ ಮತ್ತು ಪುಟ್ಟ

ಆನೆ ಬೆನ್ನ ಏರಿ ಪುಟ್ಟ ಊರು ಸುತ್ತುವ
ಕಾಡು ದಾರಿಯಲ್ಲಿ‌ ಹೋಗಿ ಜೇನ‌ ಕೀಳುವ
ಆನೆ ಬೆನ್ನ ಏರಿ ಪುಟ್ಟ ಜಾತ್ರೆ ಸುತ್ತುವ
ಬಣ್ಣ ಬಣ್ಣದ ಮಿಠಾಯಿಯನ್ನು ಕೊಂಡು ತಿನ್ನುವ
ಕಬ್ಬು ತಿನ್ನೋ ಆಸೆಯಾಗಿ ಆನೆ ಹೊಲಕೆ ಓಡಿತು
ತುಂಟತನ ಮಾಡಿ ಆನೆ ಸಿಕ್ಕಿ ಬಿದ್ದಿತು
"ಕಳ್ಳ" ಎಂದು ಊರ ಜನರ ಹೊಡೆತ ತಿಂದಿತು
ನೋವು ತಾಳಲಾಗದೇ ಆನೆ ನೆಲಕೆ ಬಿದ್ದಿತು

ರಚನೆ:- ಸಿಂಧು ಭಾರ್ಗವ್ ಬೆಂಗಳೂರು


೮))

ಮಕ್ಕಳ ಸಾಹಿತ್ಯ ಮಕ್ಕಳ ಪದ್ಯ : ಅಣ್ಣ ಬಾರಣ್ಣ

ಅಣ್ಣ ಅಣ್ಣ ನನ್ನ ಜೊತೆಗೆ ಆಡಲು ಬಾರಣ್ಣ
ಬ್ಯಾಟು ಬಾಲು ತಂದು ಇಡುವೆನು ಬೇಗ ಬಾರಣ್ಣ
ಸ್ಕೂಲ್ ಗೆ ಹೋಗುವೆ ನನ್ನನು ಬಿಟ್ಟು ಏಕೆ ಹೇಳಣ್ಣ
ತಿರುಗಿ ಬರುವ ತನಕ ಕಾಯುವೆ ನಿನ್ನೀ ಹಾದಿಯನ್ನ
ಅಣ್ಣ ಅಣ್ಣ ನನ್ನ ಜೊತೆಗೆ ಅಂಗಡಿಗೆ ಬಾರಣ್ಣ
ಮಿಠಾಯಿ ಕೊಡಿಸು ಆಟಿಕೆ ಕೊಡಿಸು ಎಂದು ಕೇಳೆನಣ್ಣ.
ನಿನ್ನ ಕೈಹಿಡಿದೇ ಸಾಗುವೆ ಪೂರ ಬೀದಿಯನ್ನ
ಅಣ್ಣ ಅಣ್ಣ ನನ್ನ ಜೊತೆಗೆ ಊಟಕೆ ಬಾರಣ್ಣ
ನಾನೊಂದು ತುತ್ತು ನೀನೊಂದು  ತುತ್ತು ಊಟವ ಮಾಡೋಣ‌
ಅಣ್ಣ ಬೇಗ ಬಾರಣ್ಣ, ತಟ್ಟೆ ಹಾಕಿ ಕಾಯುತಿರುವೆ ನಾ

ರಚನೆ: ಸಿಂಧು ಭಾರ್ಗವ್ ಬೆಂಗಳೂರು


೯))
ಮಕ್ಕಳ‌ ಪದ್ಯ : ಆನೆಮರಿ

ಆನೆಮರಿ ಆನೆಮರಿ
ಊರಿಗೊಂದು ಆನೆಮರಿ
ಆನೆಮರಿ ಆನೆಮರಿ
ನಮ್ಮ ಪ್ರೀತಿಯ ಆನೆಮರಿ

ಆನೆಮರಿ ಆನೆಮರಿ
ಕಬ್ಬು ಮುರಿದು ತಿನ್ನೊ ಮರಿ
ಆನೆಮರಿ ಆನೆಮರಿ
ಕೆರೆಯಲ್ಲಿ ಆಡುವ ಪೋಕರಿ

ಆನೆಮರಿ ಆನೆಮರಿ
ದೇವಸ್ಥಾನಕೆ ಹೋಗುವ ಮರಿ
ಆನೆಮರಿ ಆನೆಮರಿ
ದೇವರ ಘಂಟೆ ಬಾರಿಸೋ ಮರಿ

ಆನೆಮರಿ ಆನೆಮರಿ
ಡೊಳ್ಳ ಹೊಟ್ಟೆಯ ಆನೆಮರಿ
ಆನೆಮರಿ ಆನೆಮರಿ
ತುಂಟತನದ ಆನೆಮರಿ

ಆನೆಮರಿ ಆನೆಮರಿ
ತಲೆಯನಾಡಿಸುವ ಮರಿ
ಆನೆಮರಿ ಆನೆಮರಿ
ಹಾಡಿಗೆ ಕುಣಿಯೋ ಮುದ್ದುಮರಿ

ಆನೆಮರಿ ಆನೆಮರಿ
ಅದರ‌ ಮೇಲೆರಿ ನನ್ನ ಸವಾರಿ
ಆನೆಮರಿ ಆನೆಮರಿ
ಊರೆಲ್ಲ ತಿರುಗಿಸೋ ಜಾಣಮರಿ

ರಚನೆ: ಸಿಂಧು ಭಾರ್ಗವ್ ಬೆಂಗಳೂರು

೧೦))

ಮಕ್ಕಳ ಪದ್ಯ : ಮತ್ತೆ ಶಾಲೆ ಶುರುವಾಯಿತು

ದಸರ ಮುಗಿಯಿತು
 ಶಾಲೆ ಶುರುವಾಯಿತು
ಪುಟ್ಟಿಗೆ ಮಾತ್ರ ಮನಸಿಲ್ಲ
ರಜೆಯ ಗುಂಗು ಹೋಗಿಲ್ಲ

ಪಾಠೀಚೀಲ ಎಲ್ಲಿದೆಯಮ್ಮ
ಪುಸ್ತಕಗಳು ಕಾಣದಮ್ಮ
ಪೆನ್ಸಿಲ್ ರಬ್ಬರ್ ಬೇಕು ಅಮ್ಮ
ಅಂಗಡಿಗೆ ಹೋಗಿ ತರಬೇಕಮ್ಮ!!

ಅಜ್ಜಿ ಮನೆಯು ಮಜವಾಗಿತ್ತು
ಅಣ್ಣ ತಮ್ಮದಿರ ಜೊತೆ ಆಟವು ಇತ್ತು
ಸವಿಯಲು ಬಗೆಬಗೆ ಹಣ್ಣುಗಳಿತ್ತು
ಅಜ್ಜಿಯ ಕೈರುಚಿ ಸೊಗಸಾಗಿತ್ತು!!

ಬರೆಯಲು ತುಂಬಾ ಕೊಟ್ಟಿಹರಮ್ಮ
ಇನ್ನೂ ಬರೆದು ಮುಗಿದಿಲ್ಲಮ್ಮ
ಮಿಸ್ಸು ಬೈದರೆ ಏನು ಮಾಡಲಿ?
ತಲೆಕೆಳ ಮಾಡಿ ನಾನು ನಿಲ್ಲಲೇ!?

ಎಷ್ಟು ಸಲಿ ಹೇಳಿದೆ ಪುಟ್ಟಿ
ಪಾಠವು ಮೊದಲು ಮುಗಿಸಬೇಕು
ಆಟವ ನಂತರ ಆಡಬೇಕು
ಸಮಯವ ಹಾಳುಮಾಡದಿರೆಂದು
ರಜೆಯ ಮೋಜಲಿ ಮುಳುಗದಿರೆಂದು!!

ಸಿಟಿಯಲಿ ಸಂಭ್ರಮ ಏನಿದೆಯಮ್ಮ
ಅಜ್ಜಿಯ ಮನೆಯೇ ಸ್ವರ್ಗವಮ್ಮ
ಪಾಠಿಚೀಲವ ಧರಿಸಿ ನಾನು
ಶಾಲೆಯ ಕಡೆಗೆ ನಡೆಯುವೆನಮ್ಮ!!

ರಚನೆ : ಸಿಂಧು ಭಾರ್ಗವ್. ಬೆಂಗಳೂರು

೧೨))
ಮಕ್ಕಳ ಸಾಹಿತ್ಯ ಮಕ್ಕಳ‌ಪದ್ಯ :  ಗುಬ್ಬಿಯಕ್ಕ

ಗುಬ್ಬಿಯಕ್ಕ ಗುಬ್ಜಿಯಕ್ಕ ನಾನು ಬರಲೇ
ನಿನ್ನ ಪುಟ್ಟ ಗೂಡಿನಲ್ಲಿ ನಾನು ಇರಲೇ

ನಿನ್ನ ಪುಟ್ಟ ಹೊಟ್ಟೆ ನೋಡಿ ಅಚ್ಚರಿಯಾಗಿದೆ
ಅನ್ನ ಸಾರು ಮಾಡಿ ಕೊಡಲೇ ಎಂದು ಕೇಳಿದೆ
ಬೇಡ ಪುಟ್ಟ
ಹುಳು ಹುಪ್ಪಟೆ ಹೆಕ್ಕಿ ತರುವೆ
ಗುಟುಕನಿಕ್ಕಿ ಮರಿಗಳ ಹಸಿವ ನೀಗಿಸುವೆ

ನಿನ್ನ ಪುಟ್ಟ ಗೂಡು ನೋಡಿ ಅಚ್ಚರಿಯಾಗಿದೆ
ಮನೆಗೆ ಬಾ ನಿನಗೆ ಒಂದು ಕೋಣೆಯ ಕೊಡುವೆ
ಬೇಡ ಪುಟ್ಟ
ಕಸಕಡ್ಡಿ  ಹೆಕ್ಕಿ ತರುವೆ
ಒಪ್ಪವಾಗಿ ಜೋಡಿಸಿ ಪುಟ್ಟ ಗೂಡು ಕಟ್ಟುವೆ

ಗುಬ್ಬಿ ಗುಬ್ಬಿ ಚಿವ್ ಚಿವ್ ಗುಬ್ಬಿ ಆಡಲು ಬಾರೇ
ಗುಬ್ಬಿ ಗುಬ್ಬಿ ಚಿವ್ ಚಿವ್ ಗುಬ್ಬಿ ನಲಿಯುವ ಬಾರೇ
ಬೇಡ ಪುಟ್ಟ
ಭಯವು ಎನಗೆ ಕುಳಿತಿರುವೆ ಮರದಲೇ
ನಿಮ್ಮ ಮನೆಯ ಬೆಕ್ಕಿನಿಂದ ನನ್ನ ಮರಿಗಳ ಕಾಯುವೆ

ರಚನೆ : ಸಿಂಧು ಭಾರ್ಗವ್ .ಬೆಂಗಳೂರು-೨೧

೧೩))
ಮಕ್ಕಳ ಪದ್ಯ : - ಮಳೆ

ಬಾ ಬಾ ಮಳೆಯೇ
ಹನಿಹನಿ ಮಳೆಯೇ
ನೆನೆಯುತ ಕುಣಿಯುವೆ ನಿನ್ನೊಡನೆ
ಥೈ ಥೈ ಎನುತ
ಗೆಜ್ಜೆಯ ಕುಣಿಸುತ
ಹಾಡನು‌ ಹಾಡುವೆ ನಿನ್ನೊಡನೆ

ಕರಿ ಕರಿ ಮೋಡವು ಕರಗಿ ಬೀಳುತ
ಬಾಳೆ ಎಲೆಯನು ತೋಯಿಸಿದೆ
ಗುಡುಗುಡು ಸದ್ದನು ಮಾಡುತ ಗುಡುಗು
ಮನದಲಿ ಭಯವನು ಹುಟ್ಟಿಸಿದೆ

ನಾಯಿ ಮರಿಯು ಗಡ ಗಡ ನಡುಗುತ
ಗೋಣಿಯ ಮೇಲೆ ಮಲಗಿ ಇದೆ
ಬೆಕ್ಕು ತನ್ನ ಮರಿಗಳ ಜೊತೆಗೆ
ಒಲೆ ದಂಡೆಯನು ಹುಡುಕುತಿದೆ

ಹಕ್ಕಿಗಳೆಲ್ಲ ತಂಡಿಗಟ್ಟಿ
ಗೂಡನು ಸೇರಲು ಹಾರುತಿವೆ
ನೆರೆಯು ಬಂದ ನೆಪವನು ಒಡ್ಡಿ
ಶಾಲೆಗೆ ರಜೆಯು ಘೋಷಿಸಿದೆ

ಕೊಡೆಯನು ಹಿಡಿದು ಅಂಗಳದಲ್ಲಿ
ಗೆಳೆಯರ ಜೊತೆಗೆ ನಾ ನಲಿವೆ
ಬಿಸಿ ಬಿಸಿ ಬಜ್ಜಿ ಬೋಂಡವ ಮಾಡಿ
ಅಮ್ಮನು ಒಳಗೆ ಕರೆದಿಹಳೇ..

ರಚನೆ :- ಸಿಂಧು ಭಾರ್ಗವ್. ಬೆಂಗಳೂರು-೨೧

೧೪))
ಶಿಶುಗೀತೆ : ನಮ್ಮ ಮನೆ

ನಮ್ಮ‌ ಮನೆ ಇದು ನಮ್ಮ ಮನೆ
ಅಪ್ಪ ಅಮ್ಮನ ಕನಸಿನ ಮನೆ
ಅಕ್ಕ ಅಣ್ಣನು ಆಡಿದ ಮನೆ
ಜಾರಿ ಬಿದ್ದು ನಾನತ್ತ ಮನೆ // ನಮ್ಮ ಮನೆ//

ರಾಖಿ ನಾಯಿ‌ ಕಾಯುವ ಮನೆ
ಡಿಂಕು ಬೆಕ್ಕು ತಿರುಗಾಡುವ ಮನೆ
ಹಸಿರು ಹೊದ್ದಿರೋ ತೋಟದ ಮನೆ
ಚಳಿಗಾಲಕೆ ಬೆಚ್ಚಗೆ ಇರಿಸುವ ಮನೆ  //ನಮ್ಮ‌ ಮನೆ//

ಸಿಂಧು ಭಾರ್ಗವ್ ಬೆಂಗಳೂರು-೨೧


೧೫))
ಕಥನ ಕವನ : ಅರಸನ ಅನುಭವ

ಅರಸನು‌ ಪ್ರಜೆಗಳ ನೋಡುವ ತವಕದಿ
ಕುದುರೆಯನೇರಿ ಹೊರಟಿಹನು
ಸುತ್ತಲು ಹಸಿರಿನ ವನಗಳ ನಡುವೆ
ಅರಸನು ಹರುಷದಿ ಸಾಗಿದನು

ಕಾವಲಿಗಾಗಿ ಭಟರು ಕುದುರೆಯನೇರಿ
ಅರಸನ ಸುತ್ತುವರೆದಿಹರು
ಸವಿನುಡಿಯಿಂದ ನಗುಮುಖದಿಂದ
ಅರಸನು ಊರೊಳ ಸಾಗಿದನು

ಬಿಸಿಲಿನ ಕಾವು ಹೆಚ್ಚಿದ ಕೂಡಲೆ
ಅರಸಗೆ ತಲೆಯು ತಿರುಗೋಯ್ತು
ಮಟ-ಮಟ ಸೂರ್ಯನ ಶಾಖಕೆ
ಉದರದಿ ಹಸಿವು ಹೆಚ್ಚಾಯ್ತು

ಗುಡಿಸಲಿನಜ್ಜಿ ಬಿಸಿ-ಬಿಸಿ ಗಂಜಿಯ
ಅರಸನಿಗೆಂದು ನೀಡಿದಳು
ಗಬ-ಗಬ ತಿಂದು ನೀರನು ಕುಡಿದು
ಅರಸನು  ಹರುಷದಿ‌ ತೇಗಿದನು

ಅಜ್ಜಿಗೆ ವಂದನೆ ತಿಳಿಸುತ ಅರಸನು
ಹಾದಿಯ ಮುಂದಕೆ ಸಾಗಿದನು
ಆ ಊರಿಂದ ಈ ಊರಿಗೆಂದು
ನಡುವಲಿ ಹೊಳೆಯು ಒಂದಿತ್ತು

ಅರಸಗೆ ಕುದುರೆಯನೇರಿ ಹೊಳೆಯನು
ದಾಟಲು ಕಠಿಣವಾಗಿತ್ತು
ಭಟರನು‌ ಕೂಗಿ ಕರೆದು ದೋಣಿಯ ತರಲು
ಆಜ್ಞೆಯ ಮಾಡಿದನು

ದೋಣಿಯನೇರಿ ಅರಸನು ಸುಖದಿ
ದಡವಾ ಸೇರಿದನು
ನೀರಿನ ನಡುವಲಿ ಸಾಗುವ ಅನುಭವ
ಅರಸಗೆ ಖುಷಿಯ ನೀಡಿತ್ತು

ಕೇರಿಯ ಅಲೆದ ಅರಸನ ಕುದುರೆ
ಅರಮನೆ ಕಡೆಗೆ ಸಾಗಿತ್ತು
ಹೊಸ ಹೊಸ ಅನುಭವ ಗಳಿಸಿದ ಅರಸನು
ರಾಣಿಯ ಬಳಿಯಲಿ ಹೇಳಿದನು

ಬಡತನದಲ್ಲಿ ಪ್ರೀತಿ ಭರವಸೆ
ಹೊನ್ಹೊಳೆಯಾಗಿ ಹರಿಯುವುದು
ಹಸಿವಿಗೆ ಅನ್ನ ಮಲಗಲು ಭೂಮಿಯೇ
ಬಡವರ ಆಸ್ತಿಯು ಆಗಿಹುವು

ಸಿರಿತನ ಮರೆತು ಪ್ರಜೆಗಳ ಜೊತೆಯಲಿ
ಬೆರೆತಾಗಲೇ ಸಗ್ಗವಿದೆ
ನಗ ನಾಣ್ಯಗಳ ಮೂಟೆಗಿಂತ
ಹಿಡಿ ಅನ್ನದಲೇ ಬಾಳು ಇದೆ

ರಚನೆ : ಸಿಂಧು ಭಾರ್ಗವ್ | ಬೆಂಗಳೂರು

ಹೃತ್ಪೂರ್ವಕ ವಂದನೆಗಳು💐
ಸಿಂಧು ಭಾರ್ಗವ್ | ಬೆಂಗಳೂರು
ಮಕ್ಕಳ ಸಾಹಿತಿ,  ಲೇಖಕಿ, ಸಂಪಾದಕರು, ಕವಯಿತ್ರಿ, ಚಿಂತಕರು.
೨೦ ಸಂಪಾದಕತ್ವ ಕೃತಿಗಳಲ್ಲಿ ತಮ್ಮ ಬರಹಗಳು ಪ್ರಕಟವಾಗಿವೆ.
ಕನ್ನಡ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು
ಕಾವ್ಯಸಿರಿ ಪ್ರಶಸ್ತಿ
ಅಭಿರುಚಿ ಸಾಧನಾ ಶ್ರೀ ಪ್ರಶಸ್ತಿ
ಭೂಮಿ ಕಾವ್ಯ ಪುರಸ್ಕಾರ ಪಡೆದವರು
ನವಪರ್ವ ನಕ್ಷತ್ರ ಪ್ರಶಸ್ತಿ
ಉಪಾಧ್ಯಕ್ಷರು
ನವಪರ್ವ ಫೌಂಡೇಶನ್ (ರಿ.) ಬೆಂಗಳೂರು