Friday, 8 May 2020

ಮಕ್ಕಳ ನೀತಿ ಕಥೆ ಜೊತೆಗಾರ


ಮಕ್ಕಳ ಕಥೆ: ೦೬ ಜೊತೆಗಾರ

ಬೆಟ್ಟದ ಮೇಲೊಂದು ವೃದ್ಧ ದಂಪತಿಯ ಮನೆಯಿತ್ತು. ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದರೂ ಸಂಜೆಯಾಗುತ್ತಿದ್ದಂತೇ ಏನೋ ಒಂದು ರೀತಿಯ ಬೇಸರ ಅವರನ್ನು ಕಾಡುತ್ತಿತ್ತು. ಹಾಗಾಗಿ ಮನೆ ಎದುರಿಗೆ ಕೊಳವೊಂದನ್ನು ನಿರ್ಮಾಣ ಮಾಡಿದರು. ಅದರಲ್ಲಿ ಈಜಲು ಜೋಡಿ ಹಂಸಗಳನ್ನು ತಂದು ಸಾಕಿದರು. ಅವುಗಳ ಆಟಪಾಠ ನೋಡಿ ಖುಷಿಪಡುತ್ತಿದ್ದರು. ತಾವೂ ಅವುಗಳ ಜೊತೆಗೆ ಆಟವಾಡುತ್ತಾ ಸಂಜೆ ಕಳೆಯುತ್ತಿದ್ದರು. ಒಮ್ಮೆ ಅನಾಹುತ ನಡೆದೇ ಹೋಯಿತು‌. ಕತ್ತಲಾ ರಾತ್ರಿಯಲಿ ಕಾಡಿನಿಂದ ನರಿಯೊಂದು ಬಂದು ಕೊಳದಲ್ಲಿದ್ದ ಹಂಸವೊಂದನ್ನು ಕಚ್ಚಿಕೊಂಡು ಹೋಯಿತು. ಇನ್ನೊಂದು ಹಂಸ ಎಷ್ಟು ಬಿಡಿಸಿ ಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮುಂಜಾನೆ ಎದ್ದು ಎಂದಿನಂತೆ ವೃದ್ಧ ದಂಪತಿಗಳು ಕೊಳದ ಬಳಿ ಬಂದಾಗ ಅಚ್ಚರಿ ಕಾದಿತ್ತು. ಅಲ್ಲಿ ಒಂದೇ ಹಂಸವಿರುವುದು ನೋಡಿ ಭಯವಾಯಿತು. "ರೆಕ್ಕೆ ಪುಕ್ಕಗಳೆಲ್ಲ ಕಾಡುದಾರಿ ತುಂಬಾ ಚೆಲ್ಲಿರುವುದು ನೋಡಿ ಇದು ಕಾಡುಪ್ರಾಣಿಯದೇ ಕೆಲಸ, ನಮ್ಮ ಹಂಸವನ್ನು ಹೊತ್ತುಕೊಂಡು ಹೋಗಿದೆ.." ಎಂಬ ಅರಿವಾಯಿತು. ಆದರೆ ಇತ್ತ ಉಳಿದ ಒಂದು ಹಂಸಕ್ಕೆ ಬೇಸರದ ಛಾಯೆ ಮೂಡಿತು. ಒಂಟಿತನ ಕಾಡತೊಡಗಿತು. ಇದನ್ನು ಗಮನಿಸಿದ ಅಜ್ಜ ಪೇಟೆಗೆ ಹೋಗಿ ಆ ಒಂದು ಹಂಸವನ್ನು ಪುಟ್ಟ ಮಗುವಿಗೆ ಮಾರಾಟ ಮಾಡಿದರು. ತಿರುಗಿ ಬರುವಾಗ ಜೋಡಿ ಬೆಕ್ಕುಗಳನ್ನು ಕೊಂಡು ತಂದರು‌.
ಅಜ್ಜಿಗೆ ಎಲ್ಲಿಲ್ಲದ ಸಂತಸವಾಯಿತು. ಹಾಗೆಯೇ ಬೆಕ್ಕುಗಳ ಜೊತೆಗೆ ಆಟವಾಡುತ್ತ ದಿನ ಕಳೆಯಲು ಶುರುಮಾಡಿದರು. ಅವುಗಳಿಗೆ ದಿನವೂ ಹಾಲು ಬ್ರೆಡ್ ತಿನ್ನಲು ಕೊಡುತ್ತಿದ್ದರು. ಜೊತೆಗೆ ಪೇಟೆಯಿಂದ ಒಂದಷ್ಟು ಒಣಮೀನು ತಂದಿಟ್ಟುಕೊಂಡಿದ್ದರು. ಅದನ್ನೂ ದಿನವೂ ತಿನ್ನಲು ಕೊಡುತ್ತಿದ್ದರು‌. ಹೀಗಿರುವಾಗ ನೆಮ್ಮದಿಯ ಜೀವನ ಸಾಗುತಲಿತ್ತು. ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಏನೋ ಒಮ್ಮೆ ಬೆಕ್ಕು ಕಾಡಿಗೆ ಹೋಗಿದ್ದಾಗ ಅಲ್ಲಿದ್ದ ಗೂಬೆಯೊಂದು ಬೆಕ್ಕಿನ ಮೇಲೆ ದಾಳಿ ಮಾಡಿತು. ಬೆಕ್ಕು ಉಸಿರೊಂದು ಉಳಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಓಡೋಡಿ ಮನೆಯಂಗಳ ತಲುಪುತ್ತದೆ. ಅಷ್ಟರಲ್ಲೇ ಅದರ ಪ್ರಾಣ ಹಾರಿಹೋಯಿತು. ಆಗ ಅಜ್ಜಿಗೆ ಎಲ್ಲಿಲ್ಲದ ಆಘಾತವಾಗುತ್ತದೆ. ಉಳಿದ ಒಂದು ಬೆಕ್ಕಿಗೂ ತನ್ನ ಮಿತ್ರನ ಕಳೆದುಕೊಂಡ ನೋವು ಬಹುವಾಗಿ ಕಾಡಲು ಶುರುವಾಯಿತು. ಸರಿಯಾಗಿ ಏನೂ ತಿನ್ನದೇ ಸಾಯುವ ಸ್ಥಿತಿಗೆ ತಲುಪಿತು. ಹೀಗಿರುವಾಗ ಅಜ್ಜ ಮತ್ತೆ ಪೇಟೆಗೆ ಹೋಗಿ ಆ ಉಳಿದ ಒಂದು ಬೆಕ್ಕನ್ನೂ ಮಾರಲು ಮುಂದಾಗುತ್ತಾನೆ.
ಆಗ ಮಾರುಕಟ್ಟೆಯಲ್ಲಿ ಒಬ್ಬ ಹುಡುಗಿ ಕೆಲಸ ಕೇಳುತ್ತಾ ಅಂಗಡಿ ಬಾಗಿಲಿನಲ್ಲಿ ನಿಂತಿದ್ದಳು. ಅವಳನ್ನು ನೋಡಿ ಅಜ್ಜನು ಕರೆದು "ನೀನು ಯಾರು? ನಿನಗೆ ಅಪ್ಪ ಅಮ್ಮ ಯಾರೂ ಇಲ್ಲವೇ? ಸ್ಕೂಲಿಗೆ ಹೋಗುವುದಿಲ್ಲವೇ...? ಇಲ್ಲಿ ಏಕೆ ತಿರುಗುತ್ತಾ ಇದ್ದೀಯಾ..." ಎಂದು ಪ್ರಶ್ನಿಸುವನು. ಆಗ ಆ ಹುಡುಗಿ "ನಾನು ಲಿಲ್ಲಿ. ನಾನೊಬ್ಬಳು ಅನಾಥೆ. ನನಗೆ ಯಾರೂ ಇಲ್ಲ. ನಾನು ಸ್ಕೂಲಿಗೂ ಹೋಗುತ್ತಿಲ್ಲ. ಭಿಕ್ಷೆ ಬೇಡಲು ನನಗೆ ಇಷ್ಟವಿಲ್ಲ. ಹಾಗಾಗಿ ಯಾರಾದರೂ ಕೆಲಸ ಕೊಟ್ಟರೆ ಮಾಡುವೆನು. ನನಗೆ ಓದಬೇಕೆಂದು ತುಂಬಾ ಆಸೆಯಿದೆ. ಶಾಲೆಗೂ ಹೋಗಬೇಕೆಂಬ ಬಯಕೆಯಿದೆ..." ಎಂದು ತನ್ನ ಕಥೆಯನ್ನೆಲ್ಲ ಹೇಳುವಳು. ಅಜ್ಜನಿಗೆ ಎಲ್ಲಿಲ್ಲದ ಸಂತಸವಾಯಿತು. "ನಮ್ಮ ಮನೆಗೆ ಬರುವೆಯಾ? ಅಲ್ಲಿ ಅಜ್ಜಿ ಇದ್ದಾರೆ, ಅವರಿಗೆ ಸಹಾಯ ಮಾಡಿಕೊಂಡು ಇರಬಹುದು. ಓದಬಹುದು. ಅಲ್ಲಿ ತೋಟ, ಕೊಳ, ಹೂದೋಟ ಎಲ್ಲಾ ಇದೆ.ಸುಂದರ ಪ್ರಕೃತಿಯಿದೆ. ನನ್ನ ಜೊತೆ ಬರುವೆಯಾ...??" ಎಂದನು. ಲಿಲ್ಲಿಯು ಖುಷಿಯಿಂದ ಒಪ್ಪಿದಳು. ಜೊತೆಗೆ ಮಾರಲು ತಂದ ಬೆಕ್ಕನ್ನೂ ಅಜ್ಜ ವಾಪಾಸು ಮನೆಗೆ ಕರೆದುಕೊಂಡು ಹೋದನು. ನಂತರ ಲಿಲ್ಲಿ, ಅಜ್ಜ -ಅಜ್ಜಿಗೆ ಸಹಾಯ ಮಾಡಿಕೊಂಡು ಅವರ ಉದ್ಯಾನವನ, ತರಕಾರಿ ತೋಟದಲ್ಲಿ ಕೆಲಸ ಮಾಡಿಕೊಂಡು ಲವಲವಿಕೆಯಿಂದ ಓಡಾಡಿಕೊಂಡಿದ್ದಳು. ಬೆಕ್ಕೂ ಕೂಡ ಜೊತೆಗಿತ್ತು. ಹೀಗೆ ಎಲ್ಲರೂ ಖುಷಿಖುಷಿಯಿಂದ ಜೀವನ ನಡೆಸುತ್ತಿದ್ದರು.
.
.
ಕಥೆಗಾರ್ತಿ: ಸಿಂಧು ಭಾರ್ಗವ್. ಬೆಂಗಳೂರು-೨೧

No comments:

Post a Comment