Friday, 8 May 2020

ಮಕ್ಕಳ ನೀತಿ ಕಥೆ ಸ್ವಾರ್ಥಿಯಾಗದಿರಿ


ಮಕ್ಕಳ ಕಥೆ ೦೩:  ಸ್ವಾರ್ಥಿಯಾಗದಿರಿ


ಕಾನನದ ಮಧ್ಯದಲ್ಲಿ ಒಂದು ವಿಶಾಲವಾದ ಮರವಿತ್ತು. ಅದು‌ ಮುಗಿಲಿನಷ್ಟು ಎತ್ತರ ಹಾಗೆಯೇ ತನ್ನ ಅಗಲವಾದ ರೆಂಬೆಗಳನ್ನು ಚಾಚಿ ಎಲ್ಲಾ ಕಡೆ ಹರಡಿಕೊಂಡು ಬೆಳೆದಿತ್ತು. ಅದರಲ್ಲಿ ಒಂದಷ್ಟು ಗಿಡುಗನ ಗೂಡುಗಳು ಹಾಗೂ ಕಾಗೆಯ ಗೂಡುಗಳಿದ್ದವು.  ಎಲ್ಲವೂ ತಮ್ತಮ್ಮ ಗೂಡಿನಲ್ಲಿ ಮರಿಗಳ ಜೊತೆಗೆ ವಾಸವಾಗಿದ್ದವು. "ಚೀವ್ ಚೀವ್..." ಎಂಬ ಚಿಲಿಪಿಲಿಯು ಯಾವಾಗಲೂ  ಕೇಳಿ ಬರುತ್ತಿತ್ತು. ಗಿಡುಗನು ತನ್ನ ಗೂಡಿನ ಮೇಲೆಯೇ ಗಸ್ತು ಹೊಡೆಯುತ್ತಾ ಇರುತ್ತಿತ್ತು. ದೂರ-ದೂರಕೆ ಹಾರಿ ಹೋಗಿ ಗಂಡು ಗಿಡುಗವು ಆಹಾರ ತರುವ ತನಕ ಹೆಣ್ಣು ಗಿಡುಗವು ಮರಿಗಳನ್ನು ಕಾಯುವುದು ಅದರ ಜವಾಬ್ದಾರಿ ಆಗಿತ್ತು. ಒಮ್ಮೆ ಇದನ್ನೆಲ್ಲ ದೂರದಿಂದ ಗಮನಿಸುತ್ತಿದ್ದ ಕಾಗೆಗೆ, "ಆ ಗೂಡಿನಲ್ಲೇನಿರಬಹುದು. ಈ ಗಿಡುಗ ಏಕೆ ಗಸ್ತು ಹೊಡೆಯುತ್ತಿದೆ.."ಎಂಬ ಪ್ರಶ್ನೆ ಮೂಡಿತು‌. ಒಮ್ಮೆ ಹೋಗಿ ನೋಡಲೇಬೇಕು ಎಂಬ ಕುತೂಹಲ ಹೆಚ್ಚಿತು. ಆದರೆ ಆ ಹೆಣ್ಣು ಗಿಡುಗವೂ ಎಲ್ಲಿಗೂ ಕದಲುತ್ತ ಇರಲಿಲ್ಲ‌. ಅದರಿಂದ ಕಾಗೆಯೆ ಅತ್ತ ಕಡೆ ಹೋಗಲು ಭಯವಾಗುತ್ತಿತ್ತು.
ಒಮ್ಮೆ ಆ ಸಮಯ ಬಂದೇ ಬಿಟ್ಟಿತು. ಹೆಣ್ಣು ಗಿಡುಗ ಆಕಾಶದೆತ್ತರಕ್ಕೆ ಹಾರಿ ಮೋಡದ ಮರೆಯಲಿ ಮಾಯವಾಯಿತು. ಆಗ ಕಾಗೆಗೆ ತನ್ನ ಕೆಲಸಕ್ಕೆ ಇದೇ ಸರಿಯಾದ ಸಮಯ ಎಂದು ಮನದಲ್ಲೇ ಬಗೆದು ಗಿಡುಗನ ಗೂಡಿನ ಬಳಿ ಹಾರಿ ಬಂದಿತು. ಅಲ್ಲಿ ನೋಡಿದರೆ ಪರಮಾಶ್ಚರ್ಯ. "  ಹದ್ದಿಗೆ ಪುಟ್ಟಪುಟ್ಟ ಮೂರು ಮರಿಗಳಿದ್ದವು. ಎಳೆಮರಿಗಳ ನೋಡಿ ಕಾಗೆಯ ಬಾಯಲ್ಲಿ ನೀರು ಬಂದಿತು. ಹೇಗಾದರೂ ಮಾಡಿ ಇದನ್ನು ಹೊತ್ತೊಯ್ದು ತನ್ನ ಮರಿಗಳಿಗೆ ಆಹಾರವಾಗಿ ಕೊಡಬೇಕು ಎಂಬ ಕೆಟ್ಟ ಆಲೋಚನೆ ಮಾಡಿತು. ಹಾಗೆಯೇ ಒಂದನ್ನು ಅಲ್ಲಿಯೇ ತಿಂದು, ಒಂದನ್ನು ತನ್ನ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಸಾಯಿಸಿತು. ಹಾಗೆಯೇ ಸತ್ತ ಗಿಡುಗನ ಮರಿಯನ್ನು ಕಾಲಿನಲ್ಲಿ ಬಿಗಿಹಿಡಿತು ತನ್ನ ಗೂಡಿನತ್ತ ಹಾರಿಹೋಯಿತು.
ಅಲ್ಲಿ ನೋಡಿದರೆ ಏನ್ ಆಶ್ಚರ್ಯ. ಗಾಬರಿ ಹುಟ್ಟಿಸುವ ಘಟನೆ ನಡೆದಿತ್ತು. ತನ್ನ ಮರಿಗಳ ಪುಕ್ಕಗಳೆಲ್ಲ ಚೆಲ್ಲಪಿಲ್ಲಿಯಾಗಿ ಬಿದ್ದಿದ್ದವು. ಮರಿಗಳು ಕಾಣಿಸುತ್ತಿಲ್ಲ. "ಅಯ್ಯೋ... ನನ್ನ ಮರಿಗಳೆಲ್ಲಿ ??" ಎಂದು ಗೋಳಾಡಿತು. "ನಾನು ಅವುಗಳಿಗೆ ತಂದ ಈ ಹಸಿ ಮಾಂಸವನ್ನು ಏನು ಮಾಡಲಿ. ಇದನ್ನು ತಿನ್ನಲು ಈಗ ನನ್ನ ಮರಿಗಳೇ ಇಲ್ಲವಲ್ಲ .." ಎಂದು ರೋಧಿಸಿತು. ಆಗ ಮರದಿಂದ ಸರಕ್ಕನೇ ಸರಿದು ಹೋಗುತ್ತಿರುವ ಸರ್ಪವೊಂದು ಕಾಣಿಸಿತು. ಏನೆಂದು ಕಾಗೆ ಅದರ ಕಡೆಗೆ ಧಾವಿಸಿ ನೋಡಿದರೆ ತನ್ನ ಮರಿಯ ಹಸಿಮಾಂಸವನ್ನು ಬಾಯಲ್ಲಿ ಕಚ್ಚಿಕೊಂಡಿತ್ತು. ಸರಸರನೆ ಸರಿದು ಮಾಯವಾಯಿತು. ಆದರೆ ಆಗಸದಲ್ಲಿ ಗಿಡುಗ ಗಸ್ತು ಹೊಡೆಯುತ್ತಲೇ ಇದೆ. ಅಲ್ಲದೇ ಉಳಿದ ಒಂದು ಮರಿಯು ಗಾಬರಿಯಿಂದ ಕಿರುಚುತ್ತ ತಾಯಿ ಗಿಡುಗ ಬರುವುದನ್ನೇ ಕಾಯುತಲಿತ್ತು.
.
.
ನೀತಿ: ನಾವು ಕೇಡು ಬಯಸಿದರೆ ನಮಗೂ ಕೇಡು ಸಂಭವಿಸುತ್ತದೆ. ಕಾಗೆಯು ಹೇಗೆ ಗಿಡುಗನ ಮರಿಗಳನ್ನು ಸಾಯಿಸಿತೋ ಹಾಗೆಯೇ ಸರ್ಪವೂ ಕಾಗೆಯ ಮರಿಯನ್ನು ಸಾಯಿಸಿತ್ತು. ಹೆತ್ತ ಕರುಳಿನ ಸಂಕಟ ಎಲ್ಲದಕ್ಕೂ ಒಂದೇ ತೆರನಾಗಿರುತ್ತದೆ.
.
.
ಕಥೆಗಾರ್ತಿ: ಸಿಂಧು ಭಾರ್ಗವ್. ಬೆಂಗಳೂರು-೨೧

No comments:

Post a Comment